ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 21 ವರ್ಷದ ಕೂಲಿ ಕಾರ್ಮಿಕರೊಬ್ಬರು ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತುರುವೇಕೆರೆ ಸಮೀಪ ಗಾಯ ಗೊಂಡಿದ್ದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಯಿತು. ಅಷ್ಟರಲ್ಲಿ ವ್ಯಕ್ತಿಯ ಮಿದುಳು ನಿಷ್ಕ್ರೀಯಗೊಂಡಿತ್ತು. ಕುಟುಂಬದ ಸದಸ್ಯರು ವ್ಯಕ್ತಿಯ ಅಂಗಾಂಗಗಳ ದಾನಕ್ಕೆ ಸಮ್ಮತಿ ನೀಡಿದ್ದರಿಂದ ವೈದ್ಯರು ತಕ್ಷಣ ಕಾರ್ಯತತ್ಪರರಾದರು.
ವ್ಯಕ್ತಿಯ ಐದು ಅಂಗಾಂಗಗಳನ್ನು ಪಡೆಯಲಾಗಿದ್ದು,ಮೂತ್ರಪಿಂಡ ಹಾಗೂ ಯಕೃತ್ತನ್ನು ಫೋರ್ಟಿಸ್ ಆಸ್ಪತ್ರೆಗೆ, ಹೃದಯವನ್ನು ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಗೆ, ಇನ್ನೊಂದು ಮೂತ್ರಪಿಂಡವನ್ನು ಐಎನ್ಯು ಆಸ್ಪತ್ರೆಗೆ ನೀಡಲಾಯಿತು. ಅಲ್ಲದೆ ಕಾರ್ನಿಯಾವನ್ನು ನೇತ್ರಧಾಮಕ್ಕೆ ನೀಡಲಾಗಿದೆ.