ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಥಣಿಸಂದ್ರ-ರಾಚೇನಹಳ್ಳಿ ಮಾರ್ಗವಾಗಿ ಮೇಸ್ತ್ರಿಪಾಳ್ಯದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೃಷ್ಣಬೈರೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಒಂದು ವರ್ಷದಿಂದ ಈ ರಸ್ತೆ ಹಾಳಾಗಿ ಜನರು ತೊಂದರೆ ಅನುಭವಿಸುತ್ತಿದ್ದರು. ಈ ಹಿಂದೆ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಈ ರಸ್ತೆಗಳು, ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಕಾಮಗಾರಿ ಕೈಗೊಂಡಿದ್ದ ಸಂದರ್ಭದಲ್ಲಿ ಹಾಳಾಗಿದ್ದವು. ಹಾಗಾಗಿ ಮತ್ತೊಮ್ಮೆ ಈ ಸಂಪರ್ಕ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಈ ಭಾಗದ ಜನರ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಕೊಳವೆಬಾವಿ ಉದ್ಘಾಟನೆ: ರೈಲ್ವೆಮ್ಯಾನ್ ಲೇಔಟ್ನಲ್ಲಿ ನೂತನವಾಗಿ ಸ್ಥಾಪಿಸಿರುವ ಕೊಳವೆ ಬಾವಿಯನ್ನು ಉದ್ಘಾಟಿಸಿದ ಅವರು, ಈ ಭಾಗದಲ್ಲಿ ಅಂತರ್ಜಲಮಟ್ಟ ಸಾಕಷ್ಟು ಕುಸಿದಿರುವುದರಿಂದ ನೀರಿನ ಸಮಸ್ಯೆಯಿದೆ. ಒಂದು ಕೊಳವೆಬಾವಿಯಲ್ಲಿ ನೀರು ಸಿಕ್ಕಿರುವುದರಿಂದ ಮನೆಗಳಿಗೆ ನೀರು ಒದಗಿಸುವ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಪಳನಿ ವೆಂಕಟೇಶ್, ಡಿ.ಬಿ.ಸುರೇಶ್ ಗೌಡ, ಕರಿಯಪ್ಪ, ಹಾಲಪ್ಪ, ಮರಿಮಾದಯ್ಯ, ಬಸವರಾಜು, ಮಹೇಶ್ ಇದ್ದರು.