ಉಡುಪಿ: ಚಿತ್ಪಾಡಿ ಹನುಮಾನ್ ಸಾರಿಗೆ ಸಂಸ್ಥೆಯ ನೌಕರರಿಗೆ ತಿಂಗಳ ವೇತನ, ಇಎಸ್ಐ, ಪಿಎಫ್ಅನ್ನು ಅಸಮರ್ಪಕವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ಸಾರಿಗೆ ನೌಕರರು ಸಂಘದ ವತಿಯಿಂದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಂಫದ ಅಧ್ಯಕ್ಷ ನಂದಿಹಳ್ಳಿ ರಾಜಾಸಾಬ್ ಮಾತನಾಡಿ, 25 ರಿಂದ 30 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ 160 ಅಧಿಕ ನೌಕರರ ಬದುಕು ಅತಂತ್ರವಾಗಿದೆ. ಕಾರ್ಮಿಕರ ರಕ್ಷಣೆಗಾಗಿ ಹುಟ್ಟಿಕೊಂಡ ಸಂಘಟನೆಯ ಮುಖ್ಯಸ್ಥರಿಗೆ ಯಾವುದೇ
ನೋಟಿಸ್ ನೀಡದೆ ಕೆಲಸದಿಂದ ತೆಗೆದು ಹಾಕುವ ಮೂಲಕ ಬಡ ನೌಕರರ ಮೇಲೆ ಸಂಸ್ಥೆಯ ಮಾಲೀಕ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಿಸಿದರು.
ತಿಂಗಳ ಪ್ರಥಮ ವಾರದಲ್ಲಿ ನೀಡಬೇಕಾದ ವೇತನವನ್ನು ತಿಂಗಳ ಕೊನೆಯಲ್ಲಿ ನೀಡಲಾಗುತ್ತಿದೆ. ಈ ಬಗ್ಗೆ ಕಾರ್ಮಿಕ ಕಲ್ಯಾಣ ಇಲಾಖೆ ದೂರು ಸಲ್ಲಿಸಲಾಗಿದೆ. ಆದರೂ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಇದರಿಂದಾಗಿ ಜೀವನ ಸಾಗಿಸುವುದು ಕಷ್ಟವಾಗಿದೆ. ವೇತನ ಮತ್ತು ತುಟ್ಟಿಭತ್ಯೆ ಧ್ವನಿ ಎತ್ತು ಕಾರ್ಮಿಕರ ಮೇಲೆ ಹಲ್ಲೆ ನಡೆಸುವ ಮೂಲಕ ಕೆಲಸದಿಂದ ವಜಾ ಬೆದರಿಕೆ ಹಾಕುವು ಮೂಲಕ ಮಾಲೀಕರು ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ನೌಕರರ ಮೇಲೆ ದೌರ್ಜನ್ಯ ಎಸಗುತಿದ್ದಾರೆ ಎಂದು ಆರೋಪಿಸಿದ್ದಾರೆ.
ಹನುಮಾನ್ ಸಾರಿಗೆ ಸಂಸ್ಥೆಯನ್ನು ಸಂಪೂರ್ಣವಾಗಿ ಮುಚ್ಚುವ ಮಾಲೀಕರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಕಾನೂನು ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ರವಿಚಂದ್ರ ಕೆ.ಎಸ್, ಕಾರ್ಯದರ್ಶಿ ಚಂದ್ರಶೇಖರ ಮೂಡುಬೆಟ್ಟು, ಜಿ.ನಾಗರಾಜ್, ಎಚ್.ಜಿ ಸತೀಶ್ ಇದ್ದರು.
**
ವೇತನದಲ್ಲಿ ಇಎಸ್ಐ, ಪಿಎಫ್ ಕಡಿತಗೊಳಿಸಿದ್ದಾರೆ, ಅದರೆ ಅದನ್ನು ಸಂಬಂಧಪಟ್ಟ ಸಂಸ್ಥೆಗೆ ಪಾವತಿ ಮಾಡದೇ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ – ನಂದಿಹಳ್ಳಿ ರಾಜಾಸಾಬ್, ಸಂಫದ ಅಧ್ಯಕ್ಷ.