ಬೆಂಗಳೂರು: ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳಿಬ್ಬರು ಪೊಲೀಸರ ಸೋಗಿನಲ್ಲಿ ಡೈಕಿ ಮಿಜೋನೊ ಎಂಬುವರನ್ನು ಸುಲಿಗೆ ಮಾಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
‘ಇದೇ 15ರಂದು ಸಂಜೆ ನಡೆದಿರುವ ಘಟನೆ ಸಂಬಂಧ ಡೈಕಿ ಅವರು ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಂಪಾಪುರ ನಿವಾಸಿ ಡೈಕಿ ಅವರು ಊಟಕ್ಕಾಗಿ ಹೋಟೆಲೊಂದಕ್ಕೆ ಹೋಗಲು ಕ್ಯಾಬ್ ಕಾಯ್ದಿರಿಸಿದ್ದರು. ಬಳ್ಳಾರಿ ರಸ್ತೆಯಲ್ಲಿ ನಿಂತುಕೊಂಡು ಕ್ಯಾಬ್ಗಾಗಿ ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ತಾವು ಪೊಲೀಸರೆಂದು ಹೇಳಿದ್ದರು.’
’ಗಾಂಜಾ ಸಾಗಣೆ ಮಾಡುತ್ತಿದ್ದೀಯಾ ಎಂದು ಹೆದರಿಸಿ ಡೈಕಿ ಅವರನ್ನು ತಪಾಸಣೆಗೆ ಒಳಪಡಿಸಿದ್ದರು. ₹ 5 ಸಾವಿರ ನಗದು ಇದ್ದ ಬ್ಯಾಗ್ ಹಾಗೂ ಐಫೋನ್–11 ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಅಮೃತಹಳ್ಳಿ ಠಾಣೆ ಪೊಲೀಸರು ಹೇಳಿದರು.