ಬೆಂಗಳೂರು: ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ರೌಡಿ ಸುಬ್ರಹ್ಮಣ್ಯ (30) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
‘ಚಿಕ್ಕಜಾಲ ನಿವಾಸಿ ಸುಬ್ರಹ್ಮಣ್ಯ, ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮೀನುಕುಂಟೆ ಹೊಸೂರಿಗೆ ಹೋಗಿದ್ದ. ಅದೇ ವೇಳೆಯೇ ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ತಂಡ, ಆತನ ಮೇಲೆ ದಾಳಿ ಮಾಡಿ ಕೊಂದಿದೆ’ ಎಂದು ಪೊಲೀಸರು ಹೇಳಿದರು.
‘ಕೊಲೆಯಾದ ಸುಬ್ರಹ್ಮಣ್ಯ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಜಾಲ ಠಾಣೆಯ ವ್ಯಾಪ್ತಿಯ ರೌಡಿಗಳ ಪಟ್ಟಿಯಲ್ಲಿ ಆತನ ಹೆಸರನ್ನು ಸೇರಿಸಲಾಗಿತ್ತು. ಕೆಲ ಪ್ರಕರಣಗಳಲ್ಲಿ ಆತ ಜೈಲಿಗೂ ಹೋಗಿ ಬಂದಿದ್ದ.’
‘ಇತ್ತೀಚೆಗೆ ಸ್ಥಳೀಯ ಕೆಲ ಯುವಕರ ಜೊತೆ ಸುಬ್ರಹ್ಮಣ್ಯ ಜಗಳ ಮಾಡಿದ್ದ ಎಂದು ಗೊತ್ತಾಗಿದೆ. ಅದೇ ದ್ವೇಷದಿಂದಲೇ ಯುವಕರ ತಂಡ ಈ ಕೊಲೆ ಮಾಡಿರುವ ಮಾಹಿತಿಯೂ ಇದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.