ಬೆಂಗಳೂರು: ಯಶವಂತಪುರ ಬಳಿಯ ಜಾಮಿಯಾ ಮಸೀದಿ ಸಮೀಪದಲ್ಲಿ ರೌಡಿ ವಿಜಯ್ ಅಲಿಯಾಸ್ ವಿಜಿ ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
‘ನಂದಿನಿ ಲೇಔಟ್ ಠಾಣೆಯ ರೌಡಿಶೀಟರ್ ಆಗಿದ್ದ ವಿಜಯ್, ಊಟಕ್ಕೆಂದು ಸ್ನೇಹಿತರ ಜೊತೆ ಶುಕ್ರವಾರ ತಡರಾತ್ರಿ ಯಶವಂತಪುರಕ್ಕೆ ಬಂದಿದ್ದ. ಶನಿವಾರನಸುಕಿನಲ್ಲಿ ಮನೆಗೆ ವಾಪಸ್ ಹೊರಟಿದ್ದಾಗ ಆತನ ಜೊತೆ ಜಗಳ ತೆಗೆದಿದ್ದ ಸ್ನೇಹಿತರೇ ಈ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಕೊಲೆಯಲ್ಲಿ ಅಂತ್ಯವಾದ ಗಲಾಟೆ:‘ಊಟ ಮುಗಿದ ಬಳಿಕ ಸ್ನೇಹಿತರೆಲ್ಲರೂ ಪರಸ್ಪರ ಮಾತನಾಡುತ್ತ ನಿಂತಿದ್ದರು. ಅದೇ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ವಿಜಯ್ ಹಾಗೂ ಸ್ನೇಹಿತರ ಜೊತೆ ಜಗಳ ಶುರುವಾಗಿತ್ತು. ಅದು ವಿಕೋಪಕ್ಕೆ ಹೋಗುತ್ತಿದ್ದಂತೆ ಕೈ ಕೈ ಮಿಲಾಯಿಸಿದ್ದರು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ವಿಜಯ್ನನ್ನು ಮುಗಿಸಿಯೇ ಬಿಡೋಣ’ ಎಂದು ಕೂಗಾಡುತ್ತಿದ್ದ ಸ್ನೇಹಿತರು, ತಮ್ಮ ಇತರೆ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಎಲ್ಲರೂ ಸೇರಿ ನಡುರಸ್ತೆಯಲ್ಲೇ ವಿಜಯ್ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದಿದ್ದರು.’
‘ತೀವ್ರ ರಕ್ತಸ್ರಾವದಿಂದಾಗಿ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕೊಲೆಯಲ್ಲಿ ಕಿರಿಕ್ ಮಂಜ ಹಾಗೂ ಸಹಚರರ ಕೈವಾಡವಿರುವ ಶಂಕೆ ಇದ್ದು, ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.