ಬೆಂಗಳೂರು: ನಿವೇಶನ ಮಾರಾಟದ ವ್ಯವಹಾರದಲ್ಲಿ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಲವ್ಕುಮಾರ್ (74) ಅವರಿಗೆ ₹ 55 ಲಕ್ಷ ವಂಚನೆ ಮಾಡಲಾಗಿದ್ದು, ಈ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜೆ.ಪಿ.ನಗರ 7ನೇ ಹಂತದ ನಿವಾಸಿ ಲವ್ಕುಮಾರ್ ಇತ್ತೀಚೆಗೆ ದೂರು ನೀಡಿದ್ದಾರೆ. ಎಂ.ಎಸ್. ನಿರ್ಮಾಣ್ ಶೆಲ್ಟರ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಿನಾರಾಯಣ, ಶಶಿ ಪಾಟೀಲ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆನೇಕಲ್ ತಾಲ್ಲೂಕಿನ ಜಿಗಣಿ ರಾಜಪುರಹಳ್ಳಿಯ ನವ್ಯ ಬಡಾವಣೆಯಲ್ಲಿ ಎಸಿಪಿ ಅವರಿಗೆ ಸೇರಿದ್ದ ಮೂರು ನಿವೇಶನಗಳಿವೆ. ಅವುಗಳನ್ನು ಮಾರಲು ತೀರ್ಮಾನಿಸಿದ್ದ ಎಸಿಪಿ, ಆರೋಪಿಗಳ ಜೊತೆ ಮಾತುಕತೆ ನಡೆಸಿದ್ದರು. ನಿವೇಶನಗಳನ್ನು ಮಾರಿ ಹಣ ಕೊಡುವುದಾಗಿ ಆರೋಪಿಗಳು ಹೇಳಿದ್ದರು.’
‘ದಾಖಲೆ ಪಡೆದಿದ್ದ ಆರೋಪಿಗಳು, ₹ 85 ಲಕ್ಷಕ್ಕೆ ನಿವೇಶನಗಳನ್ನು ಮಾರಿದ್ದರು. ಅದರಲ್ಲಿ ₹ 30 ಲಕ್ಷವನ್ನು ಮಾತ್ರ ಲವ್ಕುಮಾರ್ ಅವರಿಗೆ ಕೊಟ್ಟಿದ್ದರು. ಉಳಿದ ಹಣ ನೀಡದೇ ವಂಚಿಸಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.