ಬೆಂಗಳೂರು: ‘ದೇಶ ಈಗ ಸಂಕಷ್ಟದಲ್ಲಿದೆ. ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು, ಒಗ್ಗಟ್ಟು ಪ್ರದರ್ಶಿಸಬೇಕು. ಎಲ್ಲರೂ ಸೇರಿ ದೇಶವನ್ನು ಸಶಕ್ತವಾಗಿಸಬೇಕು’ ಎಂದುರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ-ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
‘ಆತ್ಮನಿರ್ಭರ ಭಾರತ–ಸಮರ್ಥ ಭಾರತ’ ವಿಷಯ ಕುರಿತು ಭಾನುವಾರ ಫೇಸ್ಬುಕ್ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಆತ್ಮನಿರ್ಭರತೆ ನಮ್ಮೊಳಗಿನ ಚೈತನ್ಯವನ್ನು ಜಾಗೃತಗೊಳಿಸುತ್ತದೆ’ ಎಂದರು.
‘ನಾವು ನಮಗೆ, ಮನೆಗೆ, ಸಮಾಜಕ್ಕೆ ಭಾರವಾಗದಂತೆ, ಮತ್ತೊಬ್ಬರಿಗೆ ಸಹಾಯಹಸ್ತ ಚಾಚುವ ಸ್ವಾವಲಂಬಿ, ಸ್ವಾಭಿಮಾನಿ ಪರಿಕಲ್ಪನೆಯೇ ಆತ್ಮನಿರ್ಭರತೆ.ಪುರುಷ ಸೂಕ್ತದಲ್ಲಿ ಹೇಳಿರುವಂತೆ ಇಡೀ ದೇಶವೇ ಒಗ್ಗಟ್ಟಾಗಿ ರಾಷ್ಟ್ರ ಪುರುಷನ ರೀತಿಯಲ್ಲಿ ಎದ್ದು ನಿಲ್ಲಬೇಕು ಎಂಬುದು ಇದರ ಉದ್ದೇಶ’ ಎಂದರು.
‘ಭಾರತ ವಿವಿಧತೆಗಳ ದೇಶ. ಅನೇಕ ಭಾಷೆ, ಜಾತಿ, ಪಂಥ, ಸಂಪ್ರದಾಯಗಳನ್ನು ಹೊಂದಿರುವ ರಾಷ್ಟ್ರ. ಈ ದೇಶ ಸಮರ್ಥವಾಗಬೇಕಾದರೆ ಅನೇಕ ಸವಾಲುಗಳು ಉದ್ಭವವಾಗುವುದು ಸಹಜ. ದೇಶದ ಜನ, ನಾಯಕತ್ವ, ಸಮಾಜ ಎಲ್ಲರೂ ಸಂಘಟಿತವಾಗಿ ಇಂತಹ ಸವಾಲುಗಳನ್ನು ಎದುರಿಸಬೇಕು’ ಎಂದು ಸಲಹೆ ನೀಡಿದರು.
‘ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ದೇಶದ ನಾಯಕತ್ವ, ಜನ, ಸಂಘಟನೆಗಳು, ಸಮಾಜ ಹೀಗೆ ಇಡೀ ದೇಶ ಒಂದಾಗಿ ಸಂತ್ರಸ್ತರಿಗೆ ಆಹಾರ, ಔಷಧ ನೀಡುತ್ತಿದ್ದಾರೆ.ದೇಶದ ಪ್ರತಿಯೊಬ್ಬರೂ ಅನ್ನ, ತರಕಾರಿ, ಹಣ್ಣು, ಹಾಲು ಪಡೆಯುವಂತಹ ಆಹಾರ ಭದ್ರತೆ ಸಿಗುವಂತಾಗಬೇಕು’ ಎಂದು ಅವರು ಆಶಿಸಿದರು.