ಬೆಂಗಳೂರು: ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಮಹೋತ್ಸವ ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ನಡೆಯಿತು.
ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಲೇಗಾಯಿ ಧೋಂಡೂಸಾ ಗ್ರೂಪ್ನ ಎಸ್.ಎನ್. ಶ್ರೀನಿವಾಸಮೂರ್ತಿ ಧ್ವಜಾರೋಹಣ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಸಹಸ್ರಾರ್ಜುನರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂತ್ಯದಲ್ಲಿ ಸಭಿಕರಿಂದ ಜಯಘೋಷಗಳು ಮೊಳಗಿದವು.
ನಂತರ ಮಾತನಾಡಿದ ಎಸ್.ಎನ್.ಶ್ರೀನಿವಾಸಮೂರ್ತಿ ಅವರು, ‘ಕಾರ್ತವೀರ್ಯಾರ್ಜುನರ ವಂಶಸ್ಥರಾದ ನಾವೆಲ್ಲ ಭಾಗ್ಯವಂತರು. ಯಾವುದೇ ಕಾರ್ಯಕ್ರಮ ಮಾಡಿದರೂ ಅದನ್ನು ಶಿಸ್ತಿನಿಂದ ಮತ್ತು ರಾಜವೈಭವದಿಂದ ಮಾಡುವುದು ನಮಗೆ ರೂಢಿಗತ. ನಡೆ–ನುಡಿಯಲ್ಲಿ, ರೀತಿ–ನೀತಿಯಲ್ಲೂ ನಮ್ಮ ಸಮಾಜದವರು ಒಂದು ಹೆಜ್ಜೆ ಮುಂದಿರುವುದು ಹೆಮ್ಮೆಯ ವಿಷಯ’ ಎಂದರು.
‘ಈ ಹಿಂದೆ ವ್ಯಾಪಾರವನ್ನೇ ನಂಬಿ ಬದುಕು ನಡೆಸುತ್ತಿದ್ದ ನಮ್ಮ ಸಮಾಜದವರು ಈಗ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರಾಗಿ ಮೆರೆಯುತ್ತಿದ್ದಾರೆ. ಇದೇ ರೀತಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರೆ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದು. ವಿದ್ಯಾವಂತರಾದವರು ಸಮಾಜದ ಉದ್ಧಾರಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.
ಸಮಾಜ ಸೇವಕ ಡಿ.ಎಚ್. ನಾರಾಯಣಸಾ ಮಾತನಾಡಿ, ‘ಸಹಸ್ರಾರ್ಜುನ ಮಹಾರಾಜರ ಜಯಂತಿ ಹೆಸರಿನಲ್ಲಿ ಸಮಾಜದ ಎಲ್ಲರನ್ನೂ ಒಂದೆಡೆ ಸೇರಿಸುವುದು ಒಳ್ಳೆಯ ಕೆಲಸ’ ಎಂದು ಬಣ್ಣಿಸಿದರು.
ಮೆರವಣಿಗೆ, ವಿವಿಧ ಸ್ಪರ್ಧೆಗಳು
ಮಹೋತ್ಸವದ ಅಂಗವಾಗಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಎಸ್.ಎಸ್.ಕೆ.ಸಂಘದ ಬಳಿಯಿಂದ ಹೊರಟ ಮೆರವಣಿಗೆಯು ಬಳೇಪೇಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಶಿಕ್ಷಕರ ಸದನಕ್ಕೆ ತಲುಪಿತು.ಕಳಶ ಹೊತ್ತ ಮಹಿಳೆಯರು, ಸಾಂಸ್ಕೃತಿಕ ತಂಡಗಳು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಹಸ್ರಾರ್ಜುನ ಮಹಾರಾಜರ ವೇಷಧಾರಿ ಯುವಕ ಕುದುರೆಯ ಮೇಲೆಕುಳಿತು ಸಾಗಿದ್ದು ಮೆರುಗು ಹೆಚ್ಚಿಸಿತ್ತು. ಮಹೋತ್ಸವದ ಅಂಗವಾಗಿ ಫ್ಯಾನ್ಸಿ ಡ್ರೆಸ್, ದೇವರನಾಮ, ಕಾರ್ತವೀರ್ಯಾರ್ಜುನ ಸ್ತೋತ್ರ ಮತ್ತು ರಸಪ್ರಶ್ನೆಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ವಿಜೇತರಿಗೆ ಬಹುಮಾನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.