ಬೆಂಗಳೂರು: ಭಾರತದ ಸದೃಢತೆಗೆ ಸನಾತನ ಶಿಕ್ಷಣವೇ ಬುನಾದಿ. ಪ್ರಾಚೀನ ಕಾಲದಿಂದ ಹರಿದುಬಂದ ಈ ಜ್ಞಾನಪರಂಪರೆಯನ್ನು ಇಂದಿನ ಕಾಲಮಾನದ ಪೀಳಿಗೆಗೂ ತಲುಪಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುರೇಶ ಸೋನಿ ಪ್ರತಿಪಾದಿಸಿದರು.
ಚನ್ನೇನಹಳ್ಳಿ ಜನಸೇವಾ ವಿಶ್ವಸ್ಥ ಮಂಡಳಿಯ ಪ್ರಕಲ್ಪವಾದ ವೇದವಿಜ್ಞಾನ ಗುರುಕುಲ ಹಮ್ಮಿಕೊಂಡಿರುವ ಮೂರು ದಿನಗಳ ರಾಷ್ಟ್ರೀಯ ಗುರು ಕುಲ ಸಂಗೋಷ್ಠಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಗುರುಕುಲ ಶಿಕ್ಷಾ ವಿಶ್ವ ಸುದೀಕ್ಷಾ’ ಎಂಬ ಧ್ಯೇಯವಾಕ್ಯ ಕಾರ್ಯಕ್ರಮದ ಕೇಂದ್ರಬಿಂದು. ಗುರುಕುಲಗಳಲ್ಲಿ ಇರುವ ಭಾರತೀಯ ವಿದ್ಯೆಗಳಿಂದಲೇ ವಿಶ್ವದ ಕಲ್ಯಾಣ ನಿಶ್ಚಿತ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮನುಷ್ಯನ ಜ್ಞಾನದ ಎಳೆಯನ್ನು ಜಾಗೃತಗೊಳಿಸಿ ಜೀವನಕ್ಕೆ ಅನ್ವಯಗೊಳಿಸುವುದೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣ ಗುರುಕುಲಗಳಂತಹ ಶಿಕ್ಷಣಸಂಸ್ಥೆಗಳಿಂದ ಸಾಧ್ಯ. ಹಾಗಾಗಿ, ಎಲ್ಲರ ನಡಿಗೆ ಭಾರತೀಯ ಶಿಕ್ಷಣದ ಕೇಂದ್ರಗಳಾದ ಗುರುಕುಲಗಳ ಕಡೆಗೆ ಸಾಗಲಿ’ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಅಖಿಲ ಭಾರತ ಗುರುಕುಲ ಪ್ರಕಲ್ಪ ವೇದ ವಿಜ್ಞಾನಶೋಧ ಸಂಸ್ಥಾನದ ಅಧ್ಯಕ್ಷ ಪ್ರೊ.ರಾಮಚಂದ್ರ ಭಟ್ಟ, ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ಜಡ್ಡಿಪಾಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.