ರಾಜರಾಜೇಶ್ವರಿನಗರ: ‘ಮಕ್ಕಳಿಗೆಬಾಲ್ಯದಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಸಪ್ನ ಬುಕ್ ಹೌಸ್ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪುಸ್ತಕ ಓದುವ ಅಭ್ಯಾಸವನ್ನು ಮೈಗೂಡಿಸಿಕೊಂಡರೆ ಸಹನೆ, ಶ್ರದ್ಧೆ, ಶಿಸ್ತು, ಸಂಯಮದ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಒತ್ತಡದ ಜೀವನಶೈಲಿ, ಮಾನಸಿಕವಾಗಿ ಕುಗ್ಗಿ ಹೋಗಿರುವ ಮನಸ್ಸುಗಳಿಗೆ ನವ ಚೈತನ್ಯ ಪಡೆದುಕೊಳ್ಳಲು ಮತ್ತು ಮಾನಸಿಕ ಸದೃಢತೆ ಸಾಧಿಸಲು ಪುಸ್ತಕಗಳು ಸಹಕಾರಿ’ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ಜನರ ಆಶಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪುಸ್ತಕ ಮಳಿಗೆಯನ್ನು ಸ್ಥಾಪಿಸಿ, ಸಪ್ನ ಬುಕ್ ಹೌಸ್ ಜನಮನ್ನಣೆಯೊಂದಿಗೆ ಇತಿಹಾಸ ನಿರ್ಮಿಸಿದೆ’ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಂ.ಪ.ನಾಗರಾಜಯ್ಯ,‘ಭಾರತ ದುಡಿಮೆಗೆ ಬದಲಾಗಿ ರಜೆಗಳ ದೇಶವಾಗಿ ಪರಿವರ್ತನೆಗೊಂಡಿದ್ದು, ಇದರಿಂದ ದೇಶದ ಪ್ರಗತಿಗೆ ತೊಡಕಾಗಿದೆ. ಆ.15ರ ಸ್ವಾತಂತ್ರ್ಯ ದಿನಕ್ಕೆ ರಜೆ ಕೊಟ್ಟರೆ ಸಾಕು. ಉಳಿದ ರಜೆಗಳು ಅಗತ್ಯವಿಲ್ಲ’ ಎಂದು ಹೇಳಿದರು.
ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ,‘ಸಂಸ್ಥೆಯು 50ಕ್ಕೂ ಹೆಚ್ಚು ವರ್ಷಗಳಿಂದ ಪುಸ್ತಕ ಪ್ರಪಂಚದಲ್ಲಿ ತನ್ನದೇ ಆದ ದೂರದೃಷ್ಟಿ ಚಿಂತನೆಯಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ಹೊಸ ಮೈಲಿಗಲ್ಲು ಸ್ಥಾಪಿಸಿದೆ’ ಎಂದರು.
ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಾಹಿತಿ ಕಮಲಾ ಹಂಪನಾ ಮಾತನಾಡಿದರು.