ರಾಜರಾಜೇಶ್ವರಿನಗರ: ‘ಎಲ್ಲ ಸಮುದಾಯಗಳನ್ನು ಸರಿಸಮಾನವಾಗಿ ಕಾಣುವ ಮೂಲಕ ಆ ಸಮಾಜ ಮತ್ತು ಸಂಘಸಂಸ್ಥೆಗಳ ಅಭಿವೃದ್ದಿಗೂ ಸಂಪನ್ಮೂಲ ಒದಗಿಸಿ, ಸರ್ಕಾರ ಸಮಾನ ಹಕ್ಕನ್ನು ಒಕ್ಕಲಿಗರ ಸಂಘಕ್ಕೂ ನೀಡಬೇಕು. ಶಿಕ್ಷಣಕ್ಕಾಗಿ ಇಲ್ಲಿಯೇ ಜಾಗ ಮಂಜೂರು ಮಾಡಿಕೊಡಬೇಕು’ ಎಂದು ಶಾಸಕ ಕೃಷ್ಣಬೈರೇಗೌಡ ಒತ್ತಾಯಿಸಿದರು.
ಮಾಗಡಿ ರಸ್ತೆಯ ಶ್ರೀಗಂಧಕಾವಲ್ ಒಕ್ಕಲಿಗರ ಸಂಘಕ್ಕೆ ನೀಡಿರುವ ಭೂಮಿಯನ್ನು ಉಳಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ 50ನೇ ದಿನದ ಹೋರಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ‘ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗೂಡಿ ಆಸ್ತಿಯನ್ನು ಉಳಿಸಲು, ಎಲ್ಲ ರೀತಿಯ ಹೋರಾಟಕ್ಕೂ ಸಿದ್ದರಾಗಬೇಕು’ ಎಂದರು.
ಕಾಂಗ್ರೆಸ್ ಮುಖಂಡ ಎನ್.ಚೆಲುವರಾಯಸ್ವಾಮಿ ಅವರು, ‘ಸಮುದಾಯದ ವಿಷಯಕ್ಕೆ ಧಕ್ಕೆ ಬಂದಾಗ, ಎಲ್ಲರೂ ಒಂದಾಗಿ ನಿಲ್ಲಬೇಕು’ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಆಸ್ತಿ ಉಳಿವಿನ ಹೋರಾಟ ಸಮಿತಿ ಸಂಚಾಲಕ ಕೆ.ನ.ಲಿ.ಗೌಡ ಮಾತನಾಡಿ, ‘ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ, ಸೌಲಭ್ಯ,ಶಿಕ್ಷಣ, ಉದ್ಯೋಗದಲ್ಲಿಯೂ ಅನ್ಯಾಯವಾಗುತ್ತಿದೆ. ಜನಾಂಗದ ಕೆಲವರು ಸ್ವಾರ್ಥಕ್ಕೋಸ್ಕರ ಸಂಘವನ್ನು ಛಿದ್ರಮಾಡುತ್ತಿದ್ದಾರೆ’ ಎಂದರು.
ಬೆಂಗಳೂರು ನಗರ ಜಿಲ್ಲಾ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಘುವೀರ್ ಎಸ್.ಗೌಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಹನುಮಂತರಾಯಪ್ಪ, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಪ್ರೊ. ಎಂ.ಮಲ್ಲಯ್ಯ, ಎಂ.ಎ. ಆನಂದ್, ಕನ್ನಡ ಪರಿಚಾರಕ ಎಂ.ಪ್ರಕಾಶ್ ಮೂರ್ತಿ ಇದ್ದರು.