ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಜನತಾರಾಣಿ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ 12ನೇ ವಾರ್ಷಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ 380 ವಿದ್ಯಾರ್ಥಿಗಳಿಗೆ ಒಟ್ಟು ₹1 ಕೋಟಿ ಮೌಲ್ಯದ ವಿದ್ಯಾರ್ಥಿವೇತನದ ಚೆಕ್ ವಿತರಿಸಲಾಯಿತು.
ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಅನಂತಪುರ ಜಿಲ್ಲೆಗಳಿಂದ ಬಂದಿದ್ದ ಎಂಜಿನಿಯರಿಂಗ್, ವೈದ್ಯಕೀಯ, ಬಿ.ಎಸ್ಸಿ ಕೃಷಿ, ಎಂ.ಟೆಕ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಯಿತು.
ಈ ವೇಳೆ ಮಾತನಾಡಿದ ಲೋಕಸಭಾ ಸದಸ್ಯ ವೈ.ಸತ್ಯನಾರಾಯಣ ಚೌಧರಿ, ಸಾಕಷ್ಟು ಮಂದಿಯ ಬಳಿ ಹಣವಿದ್ದರೂ ಸಹಾಯಮಾಡಬೇಕೆಂಬ ಮನಸ್ಸು ಬರುವುದು ಕೆಲವರಿಗೆ ಮಾತ್ರ. ಅಂತವರಲ್ಲಿ ಜನತಾರಾಣಿ ಟ್ರಸ್ಟ್ ಸಂಸ್ಥಾಪಕ ವೈ.ಎಸ್.ವಿ.ಕೆ.ವಾಸುದೇವರಾವ್ ಒಬ್ಬರು’ ಎಂದರು.
ವಾಸುದೇವರಾವ್ ಮಾತನಾಡಿ, ‘ನಮಗೆ ಬರುವ ವಾರ್ಷಿಕ ಆದಾಯದಲ್ಲಿ ಶೇ 25ರಷ್ಟು ಭಾಗವನ್ನು ಟ್ರಸ್ಟ್ ವತಿಯಿಂದ ಕೈಗೊಳ್ಳುವ ಸಮಾಜಸೇವಾ ಕಾರ್ಯಗಳಿಗೆ ಮೀಸಲಾಗಿಟ್ಟಿದ್ದು, ಇದರಡಿಯಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೇವೆ. ಉತ್ತರ ಕರ್ನಾಟಕ ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ಭಾಗದವರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.