ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ತಾವು ಕೇಳಿದ್ದಕ್ಕಿಂತ ಹೆಚ್ಚಿನ ದಾಖಲೆ ಕೊಡಲು ನಿರಾಕರಿಸಿದ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಸಿಬ್ಬಂದಿಯನ್ನು ನಿಂದಿಸಿ, ಬೆದರಿಕೆ ಹಾಕಿದ್ದ ಆರೋಪದ ಮೇಲೆ ಭಾರತೀಯ ಖಭೌತ (ಐಐಎ) ವಿಜ್ಞಾನ ಸಂಸ್ಥೆಯ ವಜಾಗೊಂಡ ವಿಜ್ಞಾನಿಯೊಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕೆ. ಧನಂಜಯ್ ಬಂಧಿತ ವಿಜ್ಞಾನಿ. ತಮ್ಮ ಸಂಸ್ಥೆಯ ಹಿರಿಯ ವಿಜ್ಞಾನಿಗಳ ವಿರುದ್ಧ ₹2000 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಮಾಡಿದ್ದಧನಂಜಯ್ ಅವರನ್ನು 2018ರಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ. ಮುಖ್ಯ ಮಾಹಿತಿ ಆಯುಕ್ತರ ಆದೇಶದಂತೆ ಧನಂಜಯ್ ಅವರಿಗೆ ಸಿಎಟಿ ಡೆಪ್ಯೂಟಿ ರಿಜಿಸ್ಟ್ರಾರ್ ಕಚೇರಿಯಿಂದ ಕೆಲವು ದಾಖಲೆ ಕೊಡಬೇಕಿತ್ತು.
ಅದರಂತೆ, ಅರ್ಜಿದಾರರಿಗೆ ಕೆಲವು ದಾಖಲೆ ನೀಡಲಾಯಿತು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇನ್ನಷ್ಟು ದಾಖಲೆ ಕೊಡುವಂತೆ ಅವರು ಕೇಳಿದ್ದರು. ದಾಖಲೆಗಳನ್ನು ಕೊಡಲು ನಿರಾಕರಿಸಿದಾಗ ವಾಗ್ವಾದಕ್ಕಿಳಿದು ರಾಜಶ್ರೀ, ರೇಖಾಶ್ರೀ ಮತ್ತು ಗೀತಾ ಎಂಬುವವರಿಗೆ ಬೆದರಿಕೆ ಹಾಕಿದರು ಎನ್ನಲಾಗಿದೆ.
ಈ ಘಟನೆಯನ್ನು ಗಮನಿಸಿದ ಡೆಪ್ಯೂಟಿ ರಿಜಿಸ್ಟ್ರಾರ್ ಎ. ತೊಮಿನಾ ಹಲಸೂರು ಪೊಲೀಸರಿಗೆ ದೂರು ನೀಡಿದರು. ಸಂಸ್ಥೆಯ ವಿರುದ್ಧ ವಿಜ್ಞಾನಿ ಕಾನೂನು ಸಮರ ನಡೆಸುತ್ತಿದ್ದಾರೆ.