ಬೆಂಗಳೂರು: ‘ಸೈಕೊ ಕಿಲ್ಲರ್’ ಕುಖ್ಯಾತಿಯ ಜಯಶಂಕರ್ ಅಲಿಯಾಸ್ ಶಂಕರ್ (38) ಕಾರಾಗೃಹದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂಬಂಧ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಫೆ. 27ರಂದು ನಡೆದ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಕಾರಾಗೃಹಗಳ ಎಡಿಜಿಪಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
‘ಕಾರಾಗೃಹಗಳಲ್ಲಿ ಯಾರದ್ದೇ ಸಾವು ಸಂಭವಿಸಿದರೆ, 24 ಗಂಟೆಯೊಳಗೆ ಆಯೋಗಕ್ಕೆ ಮಾಹಿತಿ ನೀಡಬೇಕು. ಈ ಪ್ರಕರಣದಲ್ಲಿ ಆ ನಿಯಮ ಪಾಲಿಸಿಲ್ಲ. ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಜೈಲು ಅಧಿಕಾರಿಗಳು ಈ ರೀತಿ ನಡೆದುಕೊಂಡಿರಬಹುದು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕು’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
‘ಕೊಲೆ, ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯು ಆತ್ಮಹತ್ಯೆ ಮಾಡಿಕೊಂಡಿದ್ದ ದಿನವೇ ಸಂಬಂಧಪಟ್ಟ ಠಾಣೆಗೆ ವರದಿ ನೀಡಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಜೈಲು ಅಧಿಕಾರಿಯೊಬ್ಬರು ತಿಳಿಸಿದರು.