ಶಿರಸಿ: ವಿಧಾನಸಭೆ ಚುನಾವಣೆಗೆ ವರ್ಷದ ಹಿಂದಿನಿಂದಲೇ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್ ಪಕ್ಷ, ಬಣಗಳ ನಡುವಿನ ಕಿತ್ತಾಟದಿಂದಾಗಿ ಚುನಾವಣೆ ಸಮೀಪಿಸುವ ವೇಳೆಗೆ ಪ್ರಚಾರದಲ್ಲಿ ಹಿಂದೆ ಬಿದ್ದಿದೆ.
ಇಡೀ ಜಿಲ್ಲೆಯಲ್ಲಿ, ವಿಶೇಷವಾಗಿ ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಒಂದು ವರ್ಷದ ಹಿಂದಿನಿಂದಲೇ ಚುನಾವಣೆಯ ತಯಾರಿ ಶುರುಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸದಸ್ಯತ್ವ ಅಭಿಯಾನ ನಡೆಸಿ, ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸುವ ಪ್ರಯತ್ನ ನಡೆಸಿದ್ದರು. ನಿಯಮಿತವಾಗಿ ಬೂತ್, ತಾಲ್ಲೂಕು ಮಟ್ಟದ ಸಭೆ ನಡೆಸುತ್ತ, ಪಕ್ಷದ ಚಟುವಟಿಕೆ ಚುರುಕುಗೊಳಿಸಿದ್ದರು. ಆದರೆ, ಕಳೆದ ಎರಡು ತಿಂಗಳುಗಳಿಂದ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಪಕ್ಷದ ಕಾರ್ಯಕ್ರಮಗಳು, ಬಣಗಳ ಚಟುವಟಿಕೆಗೆ ಸೀಮಿತಗೊಂಡಿವೆ. ಎರಡು ಬಣಗಳ ಕಾರ್ಯಕರ್ತರು, ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹತಾಶೆಯಿಂದ ಸಾವರಿಸಿಕೊಂಡಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು, ಈ ಬಾರಿಯ ಟಿಕೆಟ್ ನಿರೀಕ್ಷೆಯಲ್ಲಿ ಇಡೀ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹಾಗೂ ನಂತರದ ದಿನಗಳಲ್ಲಿ ಸಹ, ರಾಜ್ಯ ನಾಯಕರ ಒಡನಾಟದಿಂದ ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ತಂದಿರುವ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಪುತ್ರ ನಿವೇದಿತ್ ಆಳ್ವ ಅವರು ಸಹ ಟಿಕೆಟ್ ಪಡೆಯುವ ಪೈಪೋಟಿಯಲ್ಲಿದ್ದಾರೆ.
ತಟಸ್ಥ ಧೋರಣೆ: ಈ ಇಬ್ಬರೂ ಆಕಾಂಕ್ಷಿಗಳು ಟಿಕೆಟ್ ಪಡೆಯಲು ದೆಹಲಿ ಅಲೆದಾಟ ನಡೆಸಿರುವುದರಿಂದ, ಚುನಾವಣೆ ದಿನಾಂಕ ಘೋಷಣೆಯಾದರೂ ಕಾಂಗ್ರೆಸ್ ಕಾರ್ಯಕರ್ತರು ತಲೆಕೆಡಿಸಿಕೊಂಡಿಲ್ಲ. ಅಭ್ಯರ್ಥಿ ಘೋಷಣೆಯಾದ ನಂತರವೇ, ಪಕ್ಷದ ಪ್ರಚಾರ ಆರಂಭಿಸುವ ನಿರ್ಧಾರ ತಳೆದಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಗುಟ್ಟು ಬಿಚ್ಚಿಟ್ಟರು.
‘ಶ್ರಮವಹಿಸಿ ಪಕ್ಷ ಸಂಘಟಿಸಿದ್ದೇವೆ, ಯಾರ್ಯಾರಿಗೋ ಟಿಕೆಟ್ ಕೊಡುವುದಾದರೆ, ನಾವು ಯಾಕೆ ಪಕ್ಷಕ್ಕಾಗಿ ದುಡಿಯಬೇಕು. ಕಾಂಗ್ರೆಸ್ನ ತಪ್ಪು ನಿರ್ಣಯದಿಂದಾಗಿಯೇ ಶಿರಸಿ– ಸಿದ್ದಾಪುರ ಕ್ಷೇತ್ರ ಬಿಜೆಪಿಯ ಪಾಲಾಗುತ್ತಿದೆ. ಹಿಂದಿನ ಚುನಾವಣೆಯಲ್ಲಿ ಸಹ ಕಾರ್ಯಕರ್ತರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಅಭ್ಯರ್ಥಿಯ ಆಯ್ಕೆ ನಡೆದಿತ್ತು’ ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಲವತ್ತುಕೊಂಡರು.
ಈಗಾಗಲೇ ಘೋಷಣೆಯಾಗಿರುವ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಎರಡು ಬಾರಿ ಇಡೀ ಕ್ಷೇತ್ರ ಸಂಚಾರ ಮಾಡಿರುವ ಅವರು, ಮನೆ–ಮನೆ ಭೇಟಿಗೆ ಹೆಚ್ಚು ಒತ್ತು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾಗದಿದ್ದರೂ, ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಅವರಿಗೆ ಟಿಕೆಟ್ ಖಚಿತವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಈಗಾಗಲೇ ಪ್ರಚಾರ ಪ್ರಾರಂಭಿಸಿರುವ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ‘ಕಮಲ’ಕ್ಕೆ ಮತ ನೀಡುವಂತೆ ಮತದಾರರನ್ನು ವಿನಂತಿಸುತ್ತಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ನಡೆಸುವ ಕಾರ್ಯಕರ್ತರು ಹುಡುಕಿದರೂ, ಕಾಣಸಿಗುತ್ತಿಲ್ಲ.
ಈ ನಡುವೆ ಆಳ್ವ ಬಣದಲ್ಲಿ ಗುರುತಿಸಿಕೊಂಡಿರುವವರನ್ನು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕರನ್ನಾಗಿ ನೇಮಕಗೊಳಿಸಿರುವುದು, ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಕುತೂಹಲವನ್ನು ಇಮ್ಮಡಿಸಿದೆ.
**
14 ಬ್ಲಾಕ್ಗಳಲ್ಲಿ ಚುರುಕಿನ ಕೆಲಸ
ಜಿಲ್ಲೆಯಲ್ಲಿ ಎಲ್ಲ 14 ಬ್ಲಾಕ್ಗಳಲ್ಲಿ ಕಾಂಗ್ರೆಸ್ ಪಕ್ಷ ಚುರುಕಿನಿಂದ ಕೆಲಸ ಮಾಡುತ್ತಿದೆ. ಬ್ಲಾಕ್ ಮತ್ತು ಬೂತ್ಗಳಲ್ಲಿ ಸ್ಥಳೀಯ ಮುಖಂಡರು ಸಭೆ ನಡೆಸಿ, ಪ್ರಚಾರದ ಸಿದ್ಧತೆ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಎಲ್ಲ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ಚುನಾವಣೆ ಘೋಷಣೆಯಾಗುವ ಪೂರ್ವದಿಂದ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಶಿರಸಿ– ಸಿದ್ದಾಪುರ ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.