ಬೆಂಗಳೂರು: ನಿವೃತ್ತ ಐಎಫ್ಎಸ್ ಅಧಿಕಾರಿಯ ಮನೆಯಲ್ಲಿ ಚಪ್ಪಲಿ ಕದಿಯಲು ಬಂದಿದ್ದ ಕಳ್ಳನನ್ನು ಅಧಿಕಾರಿಯೇ ಪೊಲೀಸರಿಗೆ ಒಪ್ಪಿಸಿರುವ ಘಟನೆ ಎಚ್ಎಸ್ಆರ್ ಬಡಾವಣೆಯಲ್ಲಿ ನಡೆದಿದೆ.
ಒಡಿಶಾದ ಮನೋಜ್ ಕುಮಾರ್ ರಾವತ್ (42) ಬಂಧಿತ ಆರೋಪಿ. ನಿವೃತ್ತಐಎಫ್ಎಸ್ ಅಧಿಕಾರಿ ದೇವಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಎಚ್ಎಸ್ಆರ್ ಬಡಾವಣೆಯ ಆರನೇ ಹಂತದಲ್ಲಿದ್ದ ಮನೆಯಲ್ಲಿ ದೇವಯ್ಯ ವಾಸವಿದ್ದರು. ಸೋಮವಾರ ರಾತ್ರಿ ಮನೆಗೆ ನುಗ್ಗಿದ್ದ ಕಳ್ಳ, ಎರಡನೇ ಮಹಡಿಯಲ್ಲಿದ್ದ ಚಪ್ಪಲಿ ಕದ್ದಿದ್ದ. ಜೊತೆಗೆ ಗ್ಯಾಸ್ ಸಿಲಿಂಡರ್ ಹಾಗೂ ಕನ್ನಡಿಯನ್ನೂ ಕದ್ದು ಪರಾರಿಯಾಗಲು ಯತ್ನಿಸಿದಾಗ ದೇವಯ್ಯ ಅವರ ಕೈಗೆ ಸಿಕ್ಕಿಬಿದ್ದಿದ್ದ.
ಕಾವಲುಗಾರನ ಸಹಾಯದಿಂದ ಕಳ್ಳನನ್ನು ಸೆರೆಹಿಡಿದು, ವಿಚಾರಿಸಿದಾಗ ಚಪ್ಪಲಿ ಕದಿಯಲು ಬಂದಿರುವುದಾಗಿ ಒಪ್ಪಿಕೊಂಡಿದ್ದ.
‘ಈತ ನಗರದ ಹಲವು ಭಾಗಗಳಲ್ಲಿನ ಮನೆಗಳಲ್ಲಿ ಚಪ್ಪಲಿ ಕದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.