ಬೆಂಗಳೂರು: ‘ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಾಗಿ ಕಂಡುಬರುವ ಪೋಷಕಾಂಶಗಳ ಕೊರತೆಗೆ ಮಣ್ಣಿನ ಅನಾರೋಗ್ಯವೇ ಕಾರಣ. ಮಣ್ಣಿನ ಆರೋಗ್ಯ ಕಾಪಾಡಿದರೆ ಮಾತ್ರ ಜನರ ಆರೋಗ್ಯ ಸುಧಾರಿಸಲು ಸಾಧ್ಯ’ ಎಂದು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ನಿರ್ದೇಶಕ ಬಿ.ಎನ್.ಎಸ್.ಮೂರ್ತಿ ಹೇಳಿದರು.
ಐಐಎಚ್ಆರ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಮಣ್ಣಿನ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದಾದ್ಯಂತ ಇರುವ ಎಲ್ಲ ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರಿಗೂಮಣ್ಣಿನ ಆರೋಗ್ಯ ಪತ್ರ ವಿತರಿಸಲಾಗುತ್ತಿದ್ದು, ಇಂತಹ ಯೋಜನೆಗಳು ಎಲ್ಲ ರೈತರನ್ನು ತಲುಪಬೇಕು’ ಎಂದು ಹೇಳಿದರು.
ಅಖಿಲ ಭಾರತ ಕೃಷಿ ವಿಸ್ತರಣಾ ವಿಜ್ಞಾನಿಗಳ ಸಂಸ್ಥೆಯ ಅಧ್ಯಕ್ಷಪ್ರೊ.ಕೆ.ನಾರಾಯಣ ಗೌಡ,‘ಸಮಗ್ರ ಕೃಷಿಯಿಂದ ಮಣ್ಣಿನ ಜೊತೆಗೆ ರೈತನ ಸುಧಾರಣೆಯೂ ಆಗುತ್ತದೆ. ಮಣ್ಣಿನ ನಿಖರ ಪರೀಕ್ಷೆಗಳು ನಡೆದು, ರೈತರಿಗೆ ಮಾಹಿತಿ ನೀಡಿದಾಗ ಮಾತ್ರ ಎಲ್ಲ ರೈತರು ಕೃಷಿಯಲ್ಲಿಲಾಭದಾಯಕ ಯಶಸ್ಸು ಕಾಣುತ್ತಾರೆ’ ಎಂದರು.
ಕಾರ್ಯಕ್ರಮದಲ್ಲಿ556 ರೈತರಿಗೆ ಮಣ್ಣಿನ ಆರೋಗ್ಯ ಪತ್ರ ವಿತರಿಸಲಾಯಿತು. ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ರಘುಪತಿ, ಪ್ರಧಾನ ವಿಜ್ಞಾನಿ ಬಿ.ನಾರಾಯಣಸ್ವಾಮಿ, ಎ.ಎನ್.ಗಣೇಶ ಮೂರ್ತಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.