ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕಾಗಿ ಬ್ಲ್ಯಾಕ್‌ಮೇಲ್: ಮಗನ ಕೊಲೆ

Last Updated 7 ಜೂನ್ 2022, 2:16 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಸುಲೇಮಾನ್ (18) ಅವರನ್ನು ಕೊಲೆ ಮಾಡಲಾಗಿದ್ದು, ತಂದೆ ಮೊಹಮ್ಮದ್ ಸಂಶೀರ್ (41) ಅವರೇ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಚಾಮುಂಡಿನಗರದ ನಿವಾಸಿ ಸಂಶೀರ್ ಹಾಗೂ ಮಗ ಸುಲೇಮಾನ್ ನಡುವೆ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಜಗಳ ಆಗಿತ್ತು. ಇದೇ ವೇಳೆಯೇ ಆರೋಪಿ ಸಂಶೀರ್, ಸುಲೇಮಾನ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಂಶೀರ್‌ನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಕೃಷ್ಣಗಿರಿಯಲ್ಲಿದ್ದು, ಅವರ ಮಗನೇ ಸುಲೇಮಾನ್. ಬಾರ್ ಬೆಡಿಂಗ್ ಕೆಲಸ ಮಾಡುತ್ತಿದ್ದ ಸಂಶೀರ್, ಎರಡನೇ ಪತ್ನಿ ಜೊತೆ ವಾಸವಿದ್ದ. ದಂಪತಿಗೆ ಮಕ್ಕಳಿರಲಿಲ್ಲ. ತಂದೆ ಜೊತೆ ನೆಲೆಸಿದ್ದ ಸುಲೇಮಾನ್, ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ಖರ್ಚಿಗೆ ಹಣ ನೀಡುವಂತೆ ಸುಲೇಮಾನ್, ತಂದೆಯನ್ನು ನಿತ್ಯವೂ ಒತ್ತಾಯಿಸುತ್ತಿದ್ದರು. ಹಣ ನೀಡದಿದ್ದರೆ, ಮೊದಲ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದರು. ಮಗನ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತಿದ್ದ ತಂದೆ, ಆತನಿಗೆ ಹಲವು ಬಾರಿ ಬುದ್ಧಿ ಹೇಳಿದರೂ ತಿದ್ದಿಕೊಂಡಿರಲಿಲ್ಲ’ ಎಂದೂ ಮಾಹಿತಿ ನೀಡಿದರು.

ರಾಡ್‌ನಿಂದ ಹೊಡೆದು, ವೈರ್‌ನಿಂದ ಬಿಗಿದ: ‘ಆರೋಪಿ ಸಂಶೀರ್, ಕಬ್ಬಿಣದ ರಾಡ್‌ನಿಂದ ಮಗ ಸುಲೇಮಾನ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ ಮಗ ಸಣ್ಣದಾಗಿ ಉಸಿರಾಡುತ್ತಿದ್ದ. ಅದನ್ನು ಗಮನಿಸಿದ್ದ ತಂದೆ, ಪುನಃ ವೈರ್‌ನಿಂದ ಕತ್ತು ಬಿಗಿದು ಉಸಿರು ನಿಲ್ಲಿಸಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕೊಲೆ ಬಳಿಕ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT