ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸಲಹೆಗಾರರನ್ನಾಗಿ ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ನೇಮಕ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಸಭಾಧ್ಯಕ್ಷರು ಸಲಹೆಗಾರರನ್ನು ನೇಮಿಸಿಕೊಳ್ಳುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸಭಾಧ್ಯಕ್ಷರೊಬ್ಬರು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ. ವಿಧಾನಸಭಾ ಕಾರ್ಯದರ್ಶಿಗಳೇ ಸಭಾದ್ಯಕ್ಷರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಹೀಗಾಗಿ ಪ್ರತ್ಯೇಕವಾಗಿ ನೇಮಿಸಿಕೊಳ್ಳುವುದಿಲ್ಲ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.
‘ಸಭಾಧ್ಯಕ್ಷರು ತಮ್ಮ ಆಪ್ತ ವಲಯಕ್ಕೆ ವಿಶೇಷ ಕರ್ತವ್ಯ ಅಧಿಕಾರಿಯನ್ನು (ಒಎಸ್ಡಿ) ನೇಮಿಸಿಕೊಳ್ಳಲು ಅವಕಾಶವಿದೆ. ಬಹುಶಃ ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಿಸಿಕೊಂಡು, ಬಳಿಕ ಸಲಹೆಗಾರ ಎಂದು ಪದನಾಮ ಬದಲಿಸಿರಬಹುದು. ಆದರೆ, ಸಲಹೆಗಾರ ಎಂಬ ಹುದ್ದೆ ಇಲ್ಲ’ ಎಂದು ಸಚಿವಾಲಯದ ಹೇಳಿದೆ.