ಬೆಂಗಳೂರು: ಸ್ನೇಹಿತೆಯ ಮನೆಗೆ ಹೋಗುವಾಗ ತಾಯಿ ಮೊಬೈಲ್ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡಿದ್ದಳು ಎನ್ನಲಾದ ಪ್ರಿಯಾಂಕ (16) ಎಂಬಾಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹನುಮಂತನಗರದ 9ನೇ ಅಡ್ಡರಸ್ತೆ ನಿವಾಸಿ ಪ್ರಿಯಾಂಕ, ಸ್ಥಳೀಯ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಆತ್ಮಹತ್ಯೆ ಸಂಬಂಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶನಿವಾರ ಸಂಜೆ ಸ್ನೇಹಿತೆಯ ಮನೆಗೆ ಹೋಗಲು ಸಿದ್ಧವಾಗಿದ್ದ ಪ್ರಿಯಾಂಕ, ಮೊಬೈಲ್ ಹಿಡಿದಿದ್ದಳು. ಅದನ್ನು ನೋಡಿದ್ದ ತಾಯಿ, ಮೊಬೈಲ್ ತೆಗೆದುಕೊಂಡು ಹೋಗದಂತೆ ಬುದ್ದಿವಾದ ಹೇಳಿದ್ದರು. ಕೋಪಗೊಂಡ ಬಾಲಕಿ, ತನ್ನ ಕೊಠಡಿಯೊಳಗೆ ಹೋಗಿದ್ದಳು’ ಎಂದು ಪೊಲೀಸರು ಹೇಳಿದರು.
‘ಮಗಳನ್ನು ಸಮಾಧಾನಪಡಿಸಿದ್ದ ತಾಯಿ, ದೇವಸ್ಥಾನಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿಯಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.