ಬೆಂಗಳೂರು: ‘ಶಿಕ್ಷಕರು ಬೈದರೆಂಬ ಕಾರಣಕ್ಕೆ ನೊಂದಿದ್ದಳು’ ಎನ್ನಲಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅಮೃತಾ (16) ಎಂಬಾಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೃತಾ ಸಾವಿನಿಂದ ನೊಂದ ಪೋಷಕರು ಹಾಗೂ ಸಂಬಂಧಿಕರು, ಶಾಲೆ ಆವರಣದಲ್ಲಿ ಮೃತದೇಹವಿಟ್ಟು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಿದರು.
ಬಳಿಕ, ಪುಲಿಕೇಶಿನಗರದ ಜೀವನಹಳ್ಳಿಯಲ್ಲಿರುವ ಸ್ಮಶಾನದಲ್ಲಿ ಅಮೃತಾಳ ಅಂತ್ಯಕ್ರಿಯೆ ನಡೆಯಿತು.
ನಕಲು ಮಾಡಿದ್ದನ್ನು ಪ್ರಶ್ನಿಸಿದ್ದ ಶಿಕ್ಷಕರು: ‘ಬಾಣಸವಾಡಿಯ ಒಎಂಬಿಆರ್ ಕಾಲೊನಿಯ ಮರಿಯಂ ನಿಲಯ ಪ್ರೌಢಶಾಲೆಯಲ್ಲಿ ಅಮೃತಾ ಓದುತ್ತಿದ್ದಳು. ನ. 2ರಿಂದ ಆಂತರಿಕ ಪರೀಕ್ಷೆಗಳು ಆರಂಭವಾಗಿದ್ದವು. ನಿತ್ಯವೂ ಅಮೃತಾ ಪರೀಕ್ಷೆಗೆ ಹಾಜರಾಗಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನ. 4ರಂದು ಪರೀಕ್ಷೆಗೆ ಬಂದಿದ್ದ ಅಮೃತಾ, ನಕಲು ಮಾಡುವುದಕ್ಕಾಗಿ ಚೀಟಿ ತಂದಿದ್ದಳು. ಅದನ್ನು ನೋಡಿದ್ದ ಶಿಕ್ಷಕರು, ಅಮೃತಾಳನ್ನು ತರಾಟೆಗೆ ತೆಗೆದುಕೊಂಡು ಬೈದಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.’
‘ಸಹಪಾಠಿಗಳ ಎದುರು ಶಿಕ್ಷಕರು ಬೈದಿದ್ದರಿಂದ ತನಗೆ ಅವಮಾನವಾಯಿತೆಂದು ಅಮೃತಾ ನೊಂದಿದ್ದಳು. ಅದೇ ನೋವಿನಲ್ಲಿದ್ದ ಅವಳು ಭಾನುವಾರ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೂಲಗಳು ತಿಳಿಸಿವೆ.
ಪೋಷಕರ ಹೇಳಿಕೆ ಪಡೆದು ತನಿಖೆ: ‘ಅಮೃತಾ ಸಾವಿನ ಸಂಬಂಧ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಹೇಳಿಕೆ ನೀಡಿದ್ದಾರೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.