ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಭಾಷೆಗೇ ಆದ್ಯತೆ’

ಸಾಹಿತಿ ಕಮಲಾ ಹಂಪನಾ ಒತ್ತಾಯ l ಕನ್ನಡ ಸಂಘರ್ಷ ಸಮಿತಿಯ ಪ್ರಶಸ್ತಿಗಳು ಪ್ರದಾನ
Last Updated 31 ಜನವರಿ 2021, 19:05 IST
ಅಕ್ಷರ ಗಾತ್ರ

ಬೆಂಗಳೂರು: ‘ಇಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು ಸೇರಿದಂತೆ ಎಲ್ಲೆಡೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾ ಹೇರಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಾಹಿತಿ ಕಮಲಾ ಹಂಪನಾ ತಿಳಿಸಿದರು.

ಉದಯಭಾನು ಕಲಾ ಸಂಘದ ಸಹಯೋಗದಲ್ಲಿ ಕನ್ನಡ ಸಂಘರ್ಷ ಸಮಿತಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರಿಗೆ ‘ಅನಿಕೇತನ ಪ‍್ರಶಸ್ತಿ’ (₹ 5 ಸಾವಿರ ನಗದು), ಇಂದಿರಾ ಕೃಷ್ಣಪ್ಪ ಅವರಿಗೆ ‘ನಂ.ನಂಜಪ್ಪ ಚಿರಂತನ ಪ್ರಶಸ್ತಿ’ (₹ 5 ಸಾವಿರ ನಗದು) ಹಾಗೂ ಶಿವರಾಜ್ ವತ್ತುಮುರುವಣಿ ಅವರಿಗೆ ‘ಕುವೆಂಪು ಯುವಕವಿ ಪ್ರಶಸ್ತಿ’ (₹ 1 ಸಾವಿರ ನಗದು) ಪ್ರದಾನ ಮಾಡಿ, ಮಾತನಾಡಿದರು.

‘ಕೇಂದ್ರ ಸರ್ಕಾರದ ಆಡಳಿತದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗೆ ಮಾತ್ರ ಆದ್ಯತೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಿಂದಿಯೇತರ ಭಾಷಿಗರು ಇರುವ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಗೆ ಸ್ಥಾನ ನೀಡಬೇಕು. ಅದೇ ರೀತಿ, ಇಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಿಗೆ ಭೂಮಿ, ನೀರನ್ನು ನೀಡಲಾಗಿದೆ. ಹಾಗಾಗಿ, ಕೇಂದ್ರ ಸರ್ಕಾರದ ಯಾವುದೇ ಕಚೇರಿ ಇಲ್ಲಿ ಪ್ರಾರಂಭವಾದರೂ ರಾಜ್ಯ ಭಾಷೆಗೆ ಮೊದಲ ಸ್ಥಾನ ನೀಡಬೇಕು. ಅಧಿಕಾರಕ್ಕಾಗಿ ಇಲ್ಲಿನ ರಾಜಕಾರಣಿಗಳು ರಾಜ್ಯವನ್ನು ವಿಂಗಡಿಸುವ ಮಾತುಗಳನ್ನು ಆಡುತ್ತಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ‘ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕು. ಪಕ್ಕದ ತಮಿಳುನಾಡು ತ್ರಿಭಾಷಾ ಸೂತ್ರವನ್ನು ತಿರಸ್ಕಾರ ಮಾಡಿದೆ. ಅಲ್ಲಿ ತಮಿಳು ಮತ್ತು ಇಂಗ್ಲಿಷಿಗೆ ಆದ್ಯತೆ ನೀಡಲಾಗಿದೆ. ಅಲ್ಲಿನವರು ಕೇಳಿದ್ದನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನಾವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳುವ ಮೂಲಕ ಕನ್ನಡವನ್ನು ಅಧೋಗತಿಗೆ ತಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT