ಬೆಂಗಳೂರು: ‘ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ಗೆ ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ದೂರ ಇಡುವ ಅಗತ್ಯ ಇದೆ’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯಪಟ್ಟರು.
ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್.ರಘುನಾಥ್ ಅವರ ಕತ್ರಿಗುಪ್ಪೆಯ ಅಶೋಕನಗರದಲ್ಲಿ ಆರಂಭಿಸಿರುವ ಚುನಾವಣಾ ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕದಲ್ಲಿನ 44 ಲಕ್ಷಕ್ಕೂ ಹೆಚ್ಚಿನ ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಮಹಾಸಭಾಕ್ಕೆ ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವ ಉತ್ತಮ ಅಧ್ಯಕ್ಷರ ಆಯ್ಕೆಯ ಅಗತ್ಯವಿದೆ. ರಘುನಾಥ್ ಆಯ್ಕೆಯಾದರೆ ಸಂಸ್ಥೆ ಸಮರ್ಥವಾಗಿ ಮುನ್ನಡೆದು, ಬ್ರಾಹ್ಮಣ ಸಮುದಾಯಕ್ಕೂ ಉಪಯೋಗವಾಗುವ ವಿಶ್ವಾಸ ಇದೆ ಎಂದು ಹೇಳಿದರು.
‘ಶ್ರೀ ಗುರುರಾಘವೇಂದ್ರ ಬ್ಯಾಂಕಿಗೆ ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರಿಗೆ ಅಧಿಕಾರ ನೀಡಿದರೆ ಬ್ರಾಹ್ಮಣರಿಗೆ ಮತ್ತಷ್ಟು ಅನ್ಯಾಯ ಆಗುವ ಸಾಧ್ಯತೆ ಇದೆ. ಈ ಬ್ಯಾಂಕಿನಲ್ಲಿ ಹಣವಿಟ್ಟು ಕಳೆದುಕೊಂಡ 93 ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಇದುವರೆಗೆ ವಂಚಕರ ವಿರುದ್ಧ ಮಹಾಸಭಾದ ಪದಾಧಿಕಾರಿಗಳು ಒಂದು ಮಾತನ್ನೂ ಆಡಿಲ್ಲ’ ಎಂದು ಆಕ್ಷೇಪಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಮಾತನಾಡಿ, ಕೋವಿಡ್ನ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಮಂಡಳಿ ಕೈಗೊಂಡ ಸಮುದಾಯದ ನೆರವಿನ ಯೋಜನೆಗಳಿಗೆ ಮಹಾಸಭಾ ಸಹಕರಿಸಿಲ್ಲ ಎಂದರು.
ಅಭ್ಯರ್ಥಿ ಎಸ್.ರಘುನಾಥ್ ಮಾತನಾಡಿ, ‘ಇಡೀ ರಾಜ್ಯದಾದ್ಯಂತ ಬ್ರಾಹ್ಮಣರ ಸಂಘಟನೆ ಮತ್ತು ಅಭ್ಯುದಯಕ್ಕೆ ಶ್ರಮಿಸುತ್ತೇನೆ’ ಎಂದರು.
ದಾಸಸಾಹಿತ್ಯದ ಅರಳುಮಲ್ಲಿಗೆ ಪಾರ್ಥಸಾರಥಿ, ಖ್ಯಾತ ಗಾಯಕ ಶಶಿಧರ ಕೋಟೆ, ಸಿರಿನಾಡು ಮಹಾಸಭಾದ ಸುದರ್ಶನ್, ಮಹಾಸಭಾದ ಉಪಾಧ್ಯಕ್ಷ ಶಂಕರನಾರಾಯಣ, ಬಡಗನಾಡು ಅಧ್ಯಕ್ಷ ನಾಗೇಶ್, ಕೆಎಸ್ಎಸ್ಐಡಿಸಿ ಉಪಾಧ್ಯಕ್ಷ ದತ್ತಾತ್ರಿ, ವೈ.ಎನ್.ಶರ್ಮಾ, ವತ್ಸಲಾ ನಾಗೇಶ್ ಇದ್ದರು.