ಬೆಂಗಳೂರು: ಚಿಕ್ಕಬಾಣಾವರದಲ್ಲಿ ಕಿಡಗೇಡಿಗಳು ಕಸಕ್ಕೆ ಬೆಂಕಿ ಹಾಕಿದ್ದು, ಇದರಿಂದ ಉಂಟಾಗುವ ದಟ್ಟ ಹೊಗೆಯನ್ನು ಕಂಡು ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಗಾಣಿಗರ ಹಳ್ಳಿಗೆ ಸಾಗುವ ರಸ್ತೆಯ ಬದಿಯಲ್ಲಿ ಕಸವನ್ನು ರಾಶಿ ಹಾಕಲಾಗುತ್ತಿದೆ. ಕಸ ಸುರಿಯುತ್ತಿರುವ ಜಾಗದಿಂದ 300 ಮೀಟರ್ ಪರಿಧಿಯಲ್ಲಿ ಮನೆಗಳಿವೆ. ವಾಸನೆ ತಡೆಯಲು ಆಗುವುದಿಲ್ಲ. ‘ಕಸ ಸುರಿಯುವುದನ್ನು ತಡೆಯಿರಿ’ ಎಂದು ನಿವಾಸಿಗಳು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
‘ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ವಾರಕ್ಕೆ ಮೂರು ದಿನ ಕಸಕ್ಕೆ ಬೆಂಕಿ ಹಾಕಲಾಗುತ್ತಿದೆ. ಇದರಿಂದ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿವೆ’ ಎಂದು ನಿವಾಸಿ ಸತೀಶ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುಮತಿ, ‘ಕಸ ಹಾಕುವ ಜಾಗದಲ್ಲಿ ಚಿಂದಿ ಆಯುವ ಹುಡುಗರು ಬೆಂಕಿ ಹಚ್ಚುತ್ತಿದ್ದಾರೆ. ಕಸದ ಜಾಗದ ಸುತ್ತ ಬೇಲಿ ಹಾಕಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.