ಬೆಂಗಳೂರು: ಉಪನಗರ ರೈಲು ಯೋಜನೆಗಾಗಿ ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವೆ 1,034 ಮರಗಳನ್ನು ಕಡಿಯುವ ವಿರುದ್ಧ ಪರಿಸರ ಪ್ರಿಯರು ಆನ್ಲೈನ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
jhatkaa.org ಸಂಘಟನೆಯ ಮೂಲಕ ಅಭಿಯಾನ ನಡೆಯುತ್ತಿದೆ. ಈ ಮರಗಳನ್ನು ಕಡಿಯುವ ಬಗ್ಗೆ ಮಾ.30ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದ ಅರಣ್ಯ ಇಲಾಖೆ ಈ ಕುರಿತು ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕೇವಲ 10 ದಿನಗಳ ಕಾಲಾವಕಾಶ ನೀಡಿತ್ತು. ಇದನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.
ಏ.8ರ ವೇಳೆಗೆ, 600ಕ್ಕೂ ಹೆಚ್ಚು ಜನ ಅರಣ್ಯ ಉಪಸಂರಕ್ಷಣಾಧಿಕಾರಿಗೆ jhatkaa.org ಮೂಲಕ ಇಮೇಲ್ ಮಾಡಿ, ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಆಸಕ್ತರು ಈ ವೆಬ್ಸೈಟ್ ಸಂಪರ್ಕಿಸಿ, ಮೇಲ್ ಮಾಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಸಂಘಟನೆಯ ಸದಸ್ಯರು ಮನವಿ ಮಾಡಿದ್ದಾರೆ.
ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವೆ ರೈಲ್ವೆ ಹಳಿ ದ್ವಿಪಥಕ್ಕಾಗಿ ಈ ಮರಗಳನ್ನು ಕಡಿಯಬೇಕಾಗಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು (ಕೆ–ರೈಡ್) ಹೇಳಿತ್ತು. ಕಡಿಯುವ ಮರಗಳ ಸಂಖ್ಯೆಗೆ ಪರ್ಯಾಯವಾಗಿ ಅದರ ದುಪ್ಪಟ್ಟು ಅಥವಾ ಮೂರು ಪಟ್ಟು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
ಹೀಳಲಿಗೆ ನಿಲ್ದಾಣದಲ್ಲಿ ಪ್ಲಾಟ್ಫಾರಂ ಮತ್ತು ಪ್ರಾಂಗಣ ನಿರ್ಮಾಣಕ್ಕೂ ಮರಗಳ ಕಡಿಯಬೇಕಾದ ಅನಿವಾರ್ಯತೆ ಇದೆ ಎಂದು ಕೆ–ರೈಡ್ ಹೇಳಿದೆ. ಕಡಿಯಲಾಗುವ ಮರಗಳು, ಅವುಗಳ ವಿಧ ಮತ್ತು ಅವುಗಳು ಇರುವ ಸ್ಥಳದ ನಕ್ಷೆಯನ್ನು ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ (aranya.gov.in) ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.