ಕೊಳ್ಳೇಗಾಲ: ನಗರದ ಚಿಕ್ಕರಂಗನಾಥನ ಕೆರೆಯಲ್ಲಿ ಮುಳುಗಿಸಿ ಕೃಷಿ ಅಧಿಕಾರಿ ಜಯಲಕ್ಷ್ಮಿ ಅವರ ಕೊಲೆಗೆ ಯತ್ನಿಸಿದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಿದ್ದಲಿಂಗಪುರದ ಬಸ್ ಕ್ಲೀನರ್ ಕಾರ್ತಿಕ್ (28) ಬಂಧಿತ ಆರೋಪಿ.
ಬೆಂಗಳೂರಿನ ಜಯಲಕ್ಷ್ಮಿ ಅವರು ಲೊಕ್ಕನಹಳ್ಳಿ ಹೋಬಳಿ ಕೃಷಿ ಅಧಿಕಾರಿಯಾಗಿ ಆರು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದರು. ಅವರು ಎಂದಿನಂತೆ ಕಚೇರಿ ಕೆಲಸ ಮುಗಿಸಿ ಜೆ.ಎಸ್.ಎಸ್ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿಸಿ ಕೊಲ್ಲಲು ಯತ್ನಿಸಿದ್ದಾನೆ.
ಜಯಲಕ್ಷ್ಮಿ ಅವರ ಚೀರಾಟ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ರಕ್ಷಿಸಿದ್ದಾರೆ. ಕಾರ್ತಿಕ್ನನ್ನು ಹಿಡಿದುಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾನಮತ್ತನಾಗಿದ್ದ ಕಾರ್ತಿಕ್, ’ಜಯಲಕ್ಷ್ಮಿ ನೀರಿನಲ್ಲಿ ಬಿದ್ದಿದ್ದರು. ಅವರನ್ನು ಕಾಪಾಡಲು ಹೋದೆ‘ ಎಂದು ವಾದಿಸಿದ್ದಾನೆ. ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಜಯಲಕ್ಷ್ಮಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.