ಬೆಂಗಳೂರು: ‘ಸ್ವಾಮಿ ವಿವೇಕಾನಂದರು ದೇಶವನ್ನು ಅತೀವವಾಗಿ ಪ್ರೀತಿಸುವ ಧನಾತ್ಮಕ ರಾಷ್ಟ್ರ ಪ್ರೇಮಿಯಾಗಿದ್ದರು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಹೇಳಿದರು.
ಸ್ವದೇಶಿ ಆಂದೋಲನ ಸಂಸ್ಥೆ ವತಿಯಿಂದ ಶನಿವಾರ ಎಚ್ಎಸ್ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು.
‘ಭಾರತಮಾತೆಗೆ ಅಪಮಾನ ಮಾಡುವ ಪ್ರವೃತ್ತಿಗಳು ಹೆಚ್ಚುತ್ತಿರುವುದು ಆತಂಕಕಾರಿ. ಹೀಗಾಗಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ವಿಚಾರಗಳ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ವಿವೇಕಾನಂದರ ವಿಚಾರಧಾರೆಯೂ ಇದೇ ಆಗಿತ್ತು’ ಎಂದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ‘ಜಯಂತಿ ಆಚರಿಸುವುದೆಂದರೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದೇ ಆಗಿದೆ. ಆಚರಣೆಗಳು ತಾಂತ್ರಿಕವಾಗಿರದೇ ಅರ್ಥಪೂರ್ಣವಾಗಿರಬೇಕು’ ಎಂದರು.
ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಹಲಸೂರು ಮಠದ ತತ್ವನಂದರೂಪ ಸ್ವಾಮಿ, ಸಾಯಿರಾಂ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸರೆಡ್ಡಿ, ಪಾಲಿಕೆ ಸದಸ್ಯ ಗುರುಮೂರ್ತಿರೆಡ್ಡಿ ಇದ್ದರು.