ಅಫಜಲಪುರ: ‘ರಾಣಾ ಪ್ರತಾಪ ಸಿಂಗ್ ಒಬ್ಬ ಧೀರ, ಶೂರ ರಾಜ. ಆತ ಬ್ರಿಟಿಷ್ರಿಗೆ ತಲೆಬಾಗದೆ ಹೋರಾಟ ಮಾಡಿದವರು. ಇತಿಹಾಸವನ್ನು ನೋಡಿದಾಗ ಭಾರತ ದೇಶಕ್ಕೆ ರಜಪೂತ ಕೊಡುಗೆ ಅಪಾರವಾಗಿದೆ’ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.
ಅಂಬಿಗರ ಚೌಡಯ್ಯ ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಮಹಾಕ್ಷತ್ರೀಯ ರಜಪೂತ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ರಜಪೂತ ಸಮಾಜಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನೀಡಲಾಗುತ್ತದೆ. ತಮ್ಮ ಬೇಡಿಕೆಗಳು ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ’ ಎಂದರು.
‘ರಜಪೂತ ಸಮಾಜದ ಮುಖಂಡರಾಗಿದ್ದ ದಿ.ಧರ್ಮಸಿಂಗ್ ಅವರು ಸುದೀರ್ಘ ಅವಧಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅವರ ಸಮಾಜ ಕಡಿಮೆಯಿದ್ದರೂ, ದೀರ್ಘಾವಧಿ ರಾಜಕೀಯ ಅಧಿಕಾರದಲ್ಲಿದ್ದು ಎಲ್ಲಾ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು’ ಎಂದು ಸ್ಮರಿಸಿದರು.
ಶಾಸಕ ಡಾ.ಅಜಯಸಿಂಗ್ ಮಾತನಾಡಿ, ‘ನನ್ನ ತಂದೆ ದಿ.ಧರ್ಮಸಿಂಗ್ ಅವರು ಈ ಭಾಗದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ. ಮುಂದೆಯೂ ಸಹ ಅವರ ಮಾರ್ಗದಲ್ಲಿಯೇ ನಾವೆಲ್ಲರೂ ಸಮಾಜಮುಖಿ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ರಜಪೂತ ಸಮಾಜದವರು ಸಾಹಸಿಗಳು, ಧೈರ್ಯವಂತರು ಮತ್ತು ಎಲ್ಲರೊಂದಿಗೆ ಬೆರೆತು ಜೀವನ ಸಾಗಿಸುವವರು. ಅದಕ್ಕಾಗಿಯೇ ಧರ್ಮಸಿಂಗ್ ಅವರು ಹೈ.ಕ ಭಾಗದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ಹೆಸರು ಮಾಡಿದವರಾಗಿದ್ದಾರೆ’ ಎಂದರು.
ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷ ಸಂಜಯ ಸಿಂಗ್, ತಾ.ಪಂ ಅಧ್ಯಕ್ಷೆ ರುಕ್ಮೀಣಿಬಾಯಿ ಜಮಾದಾರ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ತಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಕರೂರ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ ಚಿಣಮಗೇರಾ, ತೊಗರಿ ಮಂಡಳಿ ನಿರ್ದೇಶಕ ಸಾವಿರಪ್ಪ ಪೂಜಾರಿ, ಎಪಿಎಂಸಿ ನಿರ್ದೇಶಕರಾದ ಲಚ್ಚಪ್ಪ ಜಮಾದಾರ, ಸಿದ್ದು ದಿಕ್ಸಂಗಿ, ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಶಂಕರ ಮ್ಯಾಕೇರಿ, ತಾಲ್ಲೂಕು ಡಿಎಸ್ಎಸ್ ಸಂಚಾಲಕ ಮಹಾನಿಂಗ ಅಂಗಡಿ, ತಾಲ್ಲೂಕು ರಜಪೂತ ಸಮಾಜದ ಅಧ್ಯಕ್ಷ ಅಮರಸಿಂಗ ಠಾಕೋರ, ಉಪಾಧ್ಯಕ್ಷ ಖೇಮಸಿಂಗ್ ದುಬೆ, ಮರಾಠ ಸಂಘದ ಅಧ್ಯಕ್ಷ ದಿಲೀಪ ಪಾಟೀಲ, ಗಾಣಿಗ ಸಮಾಜದ ಅಧ್ಯಕ್ಷ ಶಂಕರಗೌಡ ಪಾಟೀಲ, ತಾಲ್ಲೂಕು ಮಹಾ ಕ್ಷತ್ರೀಯ ಸಮಾಜದ ಅಧ್ಯಕ್ಷ ಉಪಾಧ್ಯಕ್ಷ ಗೋವಿಂದಸಿಂಗ್ ಠಾಕೋರ, ಕಾರ್ಯ ದರ್ಶಿ ನೆಹರೂಸಿಂಗ್ ರಜಪೂತ, ಗುಲಾಬಸಿಂಗ್ ಠಾಕೋರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.