ಬೆಂಗಳೂರು: ಧಾರ್ಮಿಕ ವಿರೋಧಿಗಳ ಮೇಲೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದ ತಮಿಳುನಾಡು ಮೂಲದ ಮೂವರು ‘ಜಿಹಾದಿ’ಗಳನ್ನು ಪೊಲೀಸರು ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಂದ ಮೂರು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಬುಧವಾರ ಚೆನ್ನೈ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬಂಧಿತರನ್ನು ಮೊಹಮ್ಮದ್ ಹನೀಫ್ ಖಾನ್ (29) ಇಮ್ರಾನ್ ಖಾನ್ (32) ಹಾಗೂ ಉಸ್ಮಾನ್ ಗನಿ ಮೊಹಮ್ಮದ್ ಝೈನ್ (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಸಹಾಯದಿಂದ ತಮಿಳುನಾಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಗೆ ಪಿಸ್ತೂಲ್ ಪೂರೈಸಿದ ಮತ್ತೊಬ್ಬ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಬಂಧಿತರು ಡಿಸೆಂಬರ್ 3ನೇ ವಾರದಿಂದ ತಮಿಳುನಾಡಿನಿಂದ ಪರಾರಿಯಾಗಿದ್ದರು.
ತಮಿಳುನಾಡಿನಲ್ಲಿ ಬಂಧಿತರಾಗಿರುವ ಐವರು ‘ಜಿಹಾದಿ’ಗಳು ನೀಡಿದ ಸುಳಿವಿನ ಮೇಲೆ ಇವರನ್ನು ಬಂಧಿಸಲಾಯಿತು.
ಆರೋಪಿಗಳು ಎಚ್ಎಸ್ಆರ್ ಬಡಾವಣೆ, ತಿಲಕ್ನಗರ, ಮಂಗಮ್ಮನ ಪಾಳ್ಯ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ.
ಈ ತಂಡ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಂಪರ್ಕ ಹೊಂದಿರುವ ಕುರಿತು ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.