ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಎಂಜಿನಿಯರ್‌ ದೇವರಾಜ್‌ ಬಂಧನ

ಟಿಡಿಆರ್‌ ವಂಚನೆ ಪ್ರಕರಣ l ಎಂಜಿನಿಯರ್ ದೇವರಾಜ್‌ ಮನೆ ಮೇಲೆ ಕಳೆದ ವಾರ ದಾಳಿ ನಡೆಸಿದ್ದ ಎಸಿಬಿ
Last Updated 3 ಡಿಸೆಂಬರ್ 2019, 2:01 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ (ಟಿಡಿಆರ್‌) ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ, ಬಿಬಿಎಂಪಿ ಮಹದೇವಪುರ ವಲಯದ ಹಿಂದಿನ ಸಹಾಯಕ ಎಂಜಿನಿಯರ್‌ ಎಂ.ಎನ್‌. ದೇವರಾಜ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ದೇವರಾಜ್‌ ಈಗ ಬಿಬಿಎಂಪಿ ಕೇಂದ್ರ ಕಚೇರಿ ನಗರ ಯೋಜನೆ ದಕ್ಷಿಣ ವಿಭಾಗದ ಸಹಾಯಕ ಎಂಜಿನಿಯರ್‌ ಆಗಿದ್ದಾರೆ.

ಕಳೆದ ವಾರ ಎಸಿಬಿ ಅಧಿಕಾರಿಗಳು,ದೇವರಾಜ್‌ ಅವರ ಎಚ್‌ಎಸ್‌ಆರ್‌ ಬಡಾವಣೆ ಮನೆ, ಬಿಬಿಎಂಪಿ ಕಚೇರಿ, ಪತ್ನಿಗೆ ಸೇರಿದ ಕ್ಯೂಬ್ಸ್‌ ಇಂಟೀರಿಯರ್‌ ಕಚೇರಿ, ಅವರ ಖಾಸಗಿ ಸಹಾಯಕ ಮತ್ತು ಮಧ್ಯವರ್ತಿ ಜಯಪ್ರಕಾಶ್‌ ಅವರ ಸರ್ಜಾಪುರ ಸೋಂಪುರ ಗೇಟ್‌ನ ಮನೆ ಹಾಗೂ ನಿರ್ಮಾಣ ಹಂತದ ಮನೆ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಯನ್ನು ಬಂಧಿಸಲಾಗಿದೆ.

ದೇವರಾಜ್‌ ಟಿಡಿಆರ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎರಡನೇ ಅಧಿಕಾರಿ. ಇದಕ್ಕೆ ಮೊದಲು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಅವರನ್ನು ಬಂಧಿಸಲಾಗಿತ್ತು. ಕಳೆದ ವಾರ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಟಿ.ಸಿ ಪಾಳ್ಯ ಹಾಗೂ ವಾರಾಣಸಿ ಮುಖ್ಯ ರಸ್ತೆಗಳ ಅಗಲೀಕರಣಕ್ಕಾಗಿ ಕೌದೇನಹಳ್ಳಿಯ ಸರ್ವೆ ನಂಬರ್‌ 7 ಜಾಗ ಸ್ವಾಧೀನಪಡಿಸಿಕೊಳ್ಳಲು 2009ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಈ ನಿವೇಶನದ ಆರ್‌ಟಿಸಿಯು ಆನೆಮ್ಮ ಎಂಬುವವರ ಹೆಸರಿನಲ್ಲಿತ್ತು. ಈ ಬಗ್ಗೆ ಮಾಹಿತಿ ಪಡೆದ ಗುಡ್‌ ಹೋಮ್‌ ವೆಂಚರ್ಸ್‌ ಕಂಪನಿ ಪಾಲುದಾರರು, ಆನೆಮ್ಮ ಮತ್ತು ಅವರ ಮಕ್ಕಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಈ ಮಧ್ಯೆ, ಸದರಿ ಜಾಗವನ್ನು ಬಡಾವಣೆಯಾಗಿ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಾಗೂ 2.08 ಎಕರೆ ಜಾಗವನ್ನು ಸೈಯದ್‌ ಫಯಾಜ್‌ ಎಂಬುವವರಿಗೆ ಮಾರಲಾಗಿತ್ತು. ಈ ವಿಷಯ ಮರೆಮಾಚಿ, ಆನೆಮ್ಮ ಅವರ ಹೆಸರಿನಲ್ಲಿ ಪಾಲಿಕೆಯ ಮಹದೇವಪುರ ವಲಯ ಕಚೇರಿಗೆ 2013ರ ಆಗಸ್ಟ್‌ 6ರಂದು ಅರ್ಜಿ ಸಲ್ಲಿಸಲಾಗಿತ್ತು.

ಟಿ.ಸಿ ಪಾಳ್ಯ ರಸ್ತೆಗೆ 31 ಮೀಟರ್‌, ವಾರಾಣಸಿ ರಸ್ತೆಗೆ 87 ಮೀಟರ್‌ ಸೇರಿ ದಂತೆ 9783.43 ಚದರ ಮೀಟರ್‌ಗೆ 1.5ರ ಅನುಪಾತದಲ್ಲಿ 14675.14 ಚದರ ಮೀಟರ್‌ ಟಿಡಿಆರ್‌ಸಿ ಪಡೆಯಲು 2015ರ ಏಪ್ರಿಲ್‌ 9ರಂದು ಹಕ್ಕು ಬಿಡುಗಡೆ ಪತ್ರವನ್ನು ಆನೆಮ್ಮ ಅವರು ಬಿಬಿಎಂಪಿಗೆ ಸಲ್ಲಿಸಿದ್ದರು.

ಕಾನೂನುಬಾಹಿರವಾಗಿ ಶೇ 70ರಷ್ಟು ಟಿಡಿಆರ್‌ಸಿಯನ್ನು ಹೆಚ್ಚಾಗಿ ವಿತರಿಸಲು ಶಿಫಾರಸು ಮಾಡುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪಕ್ಕೆ ಅಧಿಕಾರಿ ಒಳಗಾಗಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಕುತೂಹಲದ ಸಂಗತಿ ಎಂದರೆ, ಅಧಿಸೂಚನೆ ಪ್ರಕಟವಾಗಿ 10 ವರ್ಷ ಕಳೆದಿದ್ದರೂ ನಿವೇಶನ ಮತ್ತು ಕಟ್ಟಡಗಳನ್ನು ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿಲ್ಲ. ರಸ್ತೆ ವಿಸ್ತರಣೆಯೂ ಆಗಿಲ್ಲ. ಜಮೀನು, ಕಟ್ಟಡ ಕಳೆದುಕೊಂಡವರಿಗೆ ಪರಿಹಾರವೂ ಸಿಕ್ಕಿಲ್ಲ. ಆದರೂ ಟಿಡಿಆರ್‌ಸಿ ವಿತರಿಸಲಾಗಿದೆ ಎನ್ನಲಾಗಿದೆ. ಎಸಿಬಿ ಎಸ್‌‍ಪಿ ಆರ್‌.ಬಿ. ಬಸರಗಿ ನೇತೃತ್ವದ ತಂಡ ಅಧಿಕಾರಿಯನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT