ಭದ್ರಾವತಿ: ಬಾಲಕಿಯನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ವಿವಾಹವಾಗಿದ್ದ ಯುವಕ, ಅವಳ ಶವದೊಂದಿಗೆ ಇಲ್ಲಿಗೆ ಶುಕ್ರವಾರ ವಾಪಸ್ಸಾಗಿದ್ದ ವೇಳೆ ಸಿಟ್ಟಿಗೆದ್ದ ಸಂಬಂಧಿಕರು ಆತನನ್ನು ಥಳಿಸಿದ್ದಾರೆ. ತಡೆಯಲು ಮುಂದಾದ ಪೊಲೀಸರ ಮೇಲೂ ಜನರು ಹಲ್ಲೆ ನಡೆಸಿದ್ದು, ಮೂವರು ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದಾರೆ.
ತಮ್ಮಣ್ಣ ಕಾಲೊನಿಯ ಆನಂದ (28), ಭೋವಿ ಕಾಲೊನಿಯ ಏಳನೇ ತರಗತಿಯಲ್ಲಿ ಓದುತ್ತಿದ್ದ ತನ್ನ ದೊಡ್ಡಪ್ಪನ ಮಗಳನ್ನು ವರ್ಷದ ಹಿಂದೆ ಮದುವೆಯಾಗಿದ್ದ. ಬಳಿಕ ಅವಳ ಜೊತೆ ಹೊಸಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದ. ಈ ಬಗ್ಗೆ ಆಕೆಯ ಪೋಷಕರು ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗುರುವಾರ ರಾತ್ರಿ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ಆಕೆಯ ಶವದೊಂದಿಗೆ ಆತ ಊರಿಗೆ ಬಂದಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದು ಆಕ್ರೋಶಗೊಂಡ ಬಾಲಕಿಯ ಸಂಬಂಧಿಕರು ಈ ಸಾವಿಗೆ ಆನಂದನೇ ಕಾರಣ ಎಂದು ಭಾವಿಸಿ, ಥಳಿಸಿ ಹೊಸಮನೆ ಪೊಲೀಸ್ ಠಾಣೆಗೆ ಕರೆತರಲು ಮುಂದಾದರು. ವಿಷಯ ತಿಳಿದ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ರಕ್ಷಿಸಲು ಮುಂದಾದರು. ಆಗ ಉದ್ರಿಕ್ತರು ಪೊಲೀಸರ ಮೇಲೂ ಹಲ್ಲೆ ನಡೆಸಿದರು. ಬಳಿಕ ಲಘು ಲಾಠಿ ಪ್ರಹಾರ ನಡೆಸಿ ಆನಂದನನ್ನು ಜನರಿಂದ ಬಿಡಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಒಂದಿಬ್ಬರನ್ನು ವಶಕ್ಕೆ ಪಡೆದಿದ್ದರಿಂದ ಆಕ್ರೋಶಗೊಂಡ ಜನರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ ಹೊಸಮನೆ ಠಾಣೆ ಎದುರು ಜಮಾಯಿಸಿ ಕೆಲ ಕಾಲ ಜನ ಪ್ರತಿಭಟಿನೆ ನಡೆಸಿದರು.
ಬಾಲಕಿಯ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ಆನಂದನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಹೊಸಪೇಟೆ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.