ಬೆಂಗಳೂರು: ‘ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ದತ್ತೋಪಂತ ಠೇಂಗಡಿ ಅವರು ಎಲ್ಲರಿಗೂ ಬೇಕಾಗಿದ್ದರು. ಅವರೊಂದಿಗಿನ ಮಾನವೀಯ ಸಂಬಂಧಕ್ಕೆ ಯಾವುದೇ ವೈಚಾರಿಕ ವಿಚಾರಗಳು ಅಡ್ಡಿಯಾಗಿರಲಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಉತ್ಥಾನ ಮಾಸಪತ್ರಿಕೆಯು ದತ್ತೋಪಂತ ಠೇಂಗಡಿಯವರ ಜನ್ಮಶತಾಬ್ದಿಯ ನಿಮಿತ್ತ ಆನ್ಲೈನ್ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಹೋರಾಟಗಳು, ಘೋಷಣೆಗಳಿಂದ ಮಾತ್ರ ಸಂಘಟನೆ ಗಟ್ಟಿಗೊಳ್ಳುವುದಿಲ್ಲ. ಬದಲಾಗಿ ವ್ಯಕ್ತಿ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಪರ್ಕ, ಸಂವಾದದಿಂದ ಸಾಧ್ಯ ಎನ್ನುವುದನ್ನು ಠೇಂಗಡಿ ತೋರಿಸಿಕೊಟ್ಟರು. ಅವರಿಗೆ 2003ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿ, ಘೋಷಿಸಿತು. ಆದರೆ, ಅವರು ಪುರಸ್ಕಾರವನ್ನು ತಿರಸ್ಕರಿಸಿ, ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಸರ್ಕಾರಕ್ಕೆ ತಿಳಿಸಿದ್ದರು’ ಎಂದು ನೆನಪಿಸಿಕೊಂಡರು.
ಕಾರ್ಮಿಕರಲ್ಲಿ ಜಾಗೃತಿ:‘ರಾಷ್ಟ್ರೀಯ ವಿಚಾರದ ಆಧಾರದ ಮೇಲೆ ಭಾರತದ ಹಿತಕ್ಕೆ ಸಹಕಾರಿಯಾಗುವ ಭಾರತೀಯ ಮಜ್ದೂರ್ ಸಂಘ ಸ್ಥಾಪಿಸಿದರು. ಕೃಷಿಕರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದರು. ಸ್ವದೇಶಿ ಜಾಗರಣ ಮಂಚ್ ಮೂಲಕ ರಾಷ್ಟ್ರೀಯ ಸ್ವಾವಲಂಬನೆ ಪ್ರೋತ್ಸಾಹಿಸಿದರು. ಕಾರ್ಮಿಕರ ನಡುವೆ ಪಂಥದ ವೈಮನಸ್ಸು ಬರಬಾರದು ಎಂಬ ಕಾರಣಕ್ಕೆ ಸರ್ವಪಂಥ ಸಮಾಧಾರ ಮಂಚ್ ರಚಿಸಿದರು. ರಾಷ್ಟ್ರೀಯ ಕರ್ತವ್ಯದ ಜಾಗೃತಿಯನ್ನು ಕಾರ್ಮಿಕರಲ್ಲಿ ಮೂಡಿಸಿದರು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.