ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಲವು ದಿನಗಳಿಂದ ತಮ್ಮ ಕುಟುಂಬದವರ ಜತೆಗೆ ಮಾತನಾಡಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ.
ಪ್ರಧಾನಿ ಶಿಷ್ಯವೇತನ ಯೋಜನೆ ಅಡಿಯಲ್ಲಿ ರಾಜ್ಯಕ್ಕೆಕಳುಹಿಸಲಾದ ವಿದ್ಯಾರ್ಥಿಗಳು ಇವರು. ಬಹುಸಂಖ್ಯೆಯ ವಿದ್ಯಾರ್ಥಿಗಳು ಇರುವುದು ನಗರದಲ್ಲೇ.
‘ನಮ್ಮ ಮನೆಗೆ ಇದೀಗ ದೂರವಾಣಿ ಸೌಲಭ್ಯವೂ ಇಲ್ಲ, ಇಂಟರ್ನೆಟ್ ಸೌಲಭ್ಯವೂ ಇಲ್ಲ. ನನ್ನ ಕುಟುಂಬದವರನ್ನು ಮಾತನಾಡಿಸದೆ ನನಗೆ ಆತಂಕವಾಗಿದೆ. ದಿನವಿಡೀ ಟಿವಿ ನೋಡುತ್ತ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ಎಂದು ಕಾಶ್ಮೀರದ ವಿದ್ಯಾರ್ಥಿಗಳು ಹೇಳಿದರು.
ರಜೆಗೆಂದು ಕೆಲವರು ಊರಿಗೆ ತೆರಳಿದ್ದು, ಅವರಿಗೆ ವಾಪಸ್ ಬರುವುದು ಸಹ ಸಾಧ್ಯವಾಗಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದ್ದಾರೆ.