ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ನಡೆಸುವ ಕರ್ನಾಟಕ-ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆ-ಟಿಇಟಿ) ಇದೇ 22ರಂದು ರಾಜ್ಯದ 400ಕ್ಕೂ ಅಧಿಕ ಕೇಂದ್ರಗಳಲ್ಲಿ ನಡೆಯಲಿದೆ. ವಾರಾಂತ್ಯದ ಕರ್ಫ್ಯೂ ಇರುವ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ತಿಳಿಸಿದೆ.
ಬೆಳಿಗ್ಗೆ 9.30ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 4ರವರೆಗೆ ಕ್ರಮವಾಗಿ ಪತ್ರಿಕೆ-1 ಹಾಗೂ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.
ಮೊದಲ ಪತ್ರಿಕೆಗೆ 1,03,267 ಅಭ್ಯರ್ಥಿಗಳು, ಪತ್ರಿಕೆ–2ಕ್ಕೆ 1,51,095 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಕೆ-ಟಿಇಟಿಯಲ್ಲಿ ತೇರ್ಗಡೆಯಾದವರು ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ವಾರಾಂತ್ಯದ ಕರ್ಫ್ಯೂ ಇರುವ ಜಿಲ್ಲೆಗಳ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಸ್ವಂತ ವಾಹನ ವ್ಯವಸ್ಥೆ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪರೀಕ್ಷೆಗೆ ಬರಬಹುದು ಎಂದು ಇಲಾಖೆ ತಿಳಿಸಿದೆ.