ಬೆಂಗಳೂರು: ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ರವಿ (36) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಅವರ ಸಹೋದರ ಆದಿಶಂಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
‘ಆಯುಧ ಪೂಜೆ ದಿನವಾದ ಭಾನುವಾರ ಸಂಜೆ ಈ ಕೃತ್ಯ ನಡೆದಿದೆ. ಕೊಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮೃತ ರವಿ, ಮದ್ಯವ್ಯಸನಿ. ಆತನ ಪತ್ನಿ ಗರ್ಭಿಣಿ. ಭಾನುವಾರ ಮದ್ಯ ಕುಡಿದು ಮನೆಗೆ ಬಂದಿದ್ದ ರವಿ, ಪತ್ನಿ ಜೊತೆ ಜಗಳ ಮಾಡಿ ಹೊಡೆದಿದ್ದ. ಸಹೋದರರಾದ ಆದಿಶಂಕರ್ ಹಾಗೂ ಕಾರ್ತಿಕ್, ಜಗಳ ಬಿಡಿಸಲು ಹೋಗಿದ್ದರು.’
‘ಸಹೋದರರ ಮೇಲೆ ಹಲ್ಲೆಗೆ ಮುಂದಾಗಿದ್ದ ರವಿ, ಚಾಕು ಹಿಡಿದು ಬೆದರಿಸಿದ್ದ. ತಡೆಯಲು ಬಂದ ಕಾರ್ತಿಕ್ಗೆ ಚಾಕುವಿನಿಂದ ಇರಿದಿದ್ದ. ಕೋಪಗೊಂಡ ಆದಿಶಂಕರ್, ರವಿ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ಆತನ ಹೊಟ್ಟೆಗೆ ಮೂರು–ನಾಲ್ಕು ಬಾರಿ ಇರಿದು ಕೊಂದಿದ್ದಾನೆ’ ಎಂದೂ ತಿಳಿಸಿದರು.
‘ಘಟನೆಯಲ್ಲಿ ಕಾರ್ತಿಕ್ಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.