ಬೆಂಗಳೂರು: ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಯಾಗುವ ಆಹಾರಧಾನ್ಯ ಕಾಳಸಂತೆಕೋರರ ಪಾಲಾಗುತ್ತಿರುವುದನ್ನು ತಡೆಯಲು ಆಹಾರ ಇಲಾಖೆಯ ಜಂಟಿ ನಿರ್ದೇಶಕ (ಐಟಿ ವಿಭಾಗ) ಕೆ. ರಾಮೇಶ್ವರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ತನಿಖಾ ದಳವನ್ನು ಸರ್ಕಾರ ರಚಿಸಿದೆ.
ಈ ದಳದ ಮುಖ್ಯಸ್ಥರಾಗಿ ರಾಮೇಶ್ವರಪ್ಪ ಕಾರ್ಯನಿರ್ವಹಿ ಸಲಿದ್ದು, ಇಲಾಖೆಯ ಉಪ ನಿಯಂತ್ರಕ (ಆಡಳಿತ), ಜಿಲ್ಲಾಮಟ್ಟದ ಜಂಟಿ ನಿರ್ದೇಶಕರು, ತಹಶೀಲ್ದಾರ್ಗಳು, ಸಹಾಯಕ ನಿರ್ದೇಶಕರು, ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು ತಂಡದ ಸದಸ್ಯರಾಗಿರುತ್ತಾರೆ.
ಪಡಿತರ ವಸ್ತುಗಳ ಅಕ್ರಮ ದಾಸ್ತಾನು, ಅವ್ಯವಹಾರ ಮತ್ತು ಕಾಳಸಂತೆ ವಹಿವಾಟು ನಡೆಯುವುದನ್ನು ತಡೆಗಟ್ಟಲು ಹಾಗೂ ಫಲಾನುಭವಿಗೆ ಪಡಿತರ ತಲುಪುವಂತೆ ಮಾಡಲು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ರಾಜ್ಯಮಟ್ಟದ ತನಿಖಾ ದಳ ರಚಿಸುವಂತೆ ಆಹಾರ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಆಹಾರ ಸಚಿವ ಉಮೇಶ ಕತ್ತಿ ಅವರು ತನಿಖಾ ದಳವನ್ನು ರಚಿಸುವಂತೆ ಸೂಚಿಸಿದ್ದರು.