ಬೆಂಗಳೂರು: ‘ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಸರ್ಕಾರಿ ಭೂಮಿಯನ್ನು ಜೆಎಸ್ಡಬ್ಲ್ಯೂ ಕಂಪನಿಗೆ ಮಾರಾಟ ಮಾಡುವ ಸರ್ಕಾರದ ನಿರ್ಧಾರವು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಹೈಕೋರ್ಟ್ ತಿಳಿಸಿದೆ.
ಭೂಮಿ ಪರಭಾರೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಏಪ್ರಿಲ್ 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ ಮಾರಾಟ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದ್ದರೂ, ನಂತರ ಸಭೆಯಲ್ಲಿ ಇದನ್ನು ದೃಢಪಡಿಸಿಲ್ಲ’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಜಾಗ ಮಾರಾಟದ ಬಗ್ಗೆ ನಿಲುವು ಸ್ಪಷ್ಟಪಸುವಂತೆ ಹಿಂದಿನ ವಿಚಾರಣೆ ವೇಳೆ ಪೀಠ ನಿರ್ದೇಶನ ನೀಡಿತ್ತು.
‘ಸಚಿವ ಸಂಪುಟದ ಸಭೆಯಲ್ಲೇ ಕೆಲವರು ವಿರೋಧಿಸಿದ್ದರೂ, ಸರ್ಕಾರಿ ಭೂಮಿವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಅರ್ಜಿದಾರ ಕೆ.ಎ. ಪಾಲ್ ಆರೋಪಿಸಿದ್ದಾರೆ.