ಬೆಂಗಳೂರು: ಉದ್ಘಾಟನೆಯ ಮರುದಿ ನವೇ ಬಾಲಭವನದ ಪುಟಾಣಿ ರೈಲು ಸಂಚಾರ ಮತ್ತು ಬೋಟಿಂಗ್ ಸ್ಥಗಿತಗೊಂಡಿದೆ.
ನವೀಕರಿಸಿದ ಬಾಲಭವನ, ಬೋಟಿಂಗ್ ಮತ್ತು ಪುಟಾಣಿ ರೈಲಿಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದ್ದರು.
ಆದರೆ, ಮರುದಿನವೇ ಬಾಲಭವನದ ಗೇಟಿಗೆ ಪುಟಾಣಿ ರೈಲು, ಬೋಟಿಂಗ್ ಅಮ್ಯೂಸ್ಮೆಂಟ್ ಯಾವುದು ಲಭ್ಯವಿರುವುದಿಲ್ಲ. ಮುಂದಿನ ವಾರದೊಳಗೆ ಪ್ರಾರಂಭಿಸಲಾಗುವುದು ಎಂಬ ಫಲಕ ಅಳವಡಿಸಲಾಗಿದೆ. ಇದರಿಂದ ಭಾನುವಾರ ಬಾಲಭವನಕ್ಕೆ ಬಂದ ನೂರಾರು ಮಕ್ಕಳು ಮತ್ತು ಅವರ ಪಾಲಕರಿಗೆ ನಿರಾಸೆಯಾಗಿದೆ.
‘ನಗರದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರವಾಗಿರುವ ಬಾಲಭವನದಲ್ಲಿ ಸದಾ ಮಕ್ಕಳ ಚಟುವಟಿಕೆ ನಡೆಯುತ್ತಿತ್ತು. ಕಳೆದ ಎರಡೂ–ಮೂರು ವರ್ಷಗಳಿಂದ ಸ್ಮಾರ್ಟ್ಸಿಟಿ ಯೋಜನೆ ಅಡಿಯಲ್ಲಿ ನವೀಕರಣ ಕೆಲಸಗಳು ನಡೆಯುತ್ತಿರುವುದರಿಂದ ಇಲ್ಲಿನ ಪುಟಾಣಿ ರೈಲು ಕಾರ್ಯಾಚರಣೆಯನ್ನು ಸಹ ಸ್ಥಗಿತಗೊಳಿಸಲಾಗಿತ್ತು. ಪುಟಾಣಿ ರೈಲಿನಲ್ಲಿ ಸಂಚರಿಸಬೇಕೆನ್ನುವ ಮಕ್ಕಳ ಆಸೆ ಉದ್ಘಾಟನೆಯ ನಂತರವೂ ಈಡೇರಿಲ್ಲ. ಆದರೂ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಾಲಭವನದ ಪ್ರವೇಶಕ್ಕೆ ₹20 ಶುಲ್ಕ ಪಾವತಿಸಬೇಕಾಗಿದೆ’ ಎಂದು ಜಯನಗರದ ನಿವಾಸಿ ಆಶಿಶ್ ಮೆಹ್ತಾ ಆಕ್ರೋಶ ವ್ಯಕ್ತಪಡಿಸಿದರು.
‘ಪುಟಾಣಿ ರೈಲು ಮತ್ತು ಬೋಟಿಂಗ್ ವ್ಯವಸ್ಥೆ ಸಾರ್ವಜನಿಕರಿಗೆ ಮುಕ್ತವಾದ ನಂತರವೇ ಅಧಿಕೃತವಾಗಿ ಉದ್ಘಾಟನೆಗೊಳಿಸಬೇಕಿತ್ತು. ಆದರೆ, ತರಾತುರಿ ಯಲ್ಲಿ ಉದ್ಘಾಟಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಖಂಡ ನೀಯ. ಮಕ್ಕಳೊಂದಿಗೆ ಬಾಲ ಭವನಕ್ಕೆ ಬಂದು ನೋಡಿದರೇ ರೈಲು ಮತ್ತು ಬೋಟಿಂಗ್ ಸೇವೆಯೇ ಲಭ್ಯವಿಲ್ಲ ಎಂಬ ಫಲಕವನ್ನು ಗೇಟಿಗೆ ಅಂಟಿಸಿಲಾಗಿದೆ’ ಎಂದು ಜಾಲಹಳ್ಳಿಯ ನಿವಾಸಿ ರಮೇಶ ಬೇಸರ ವ್ಯಕ್ತಪಡಿಸಿದರು.
ಮುಂದಿನ ವಾರದಿಂದ ಪುಟಾಣಿ ರೈಲು ಲಭ್ಯ’
‘ಬಾಲಭವನದ ಪುಟಾಣಿ ರೈಲು ಮತ್ತು ಬೋಟಿಂಗ್ ವ್ಯವಸ್ಥೆಯ ಪೂರ್ವ ಸಿದ್ಧತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ವಾರದಿಂದ ಬಾಲಭವನದ ಪುಟಾಣಿ ರೈಲು ಸೇರಿ ಎಲ್ಲ ಸೌಲಭ್ಯಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ’ ಎಂದು ಬಾಲಭವನದ ಕಾರ್ಯದರ್ಶಿ ರಾಜಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.