ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ರಾಯಪತಿ ವೆಂಕಣ್ಣ ಅಲಿಯಾಸ್ ವೆಂಕಯ್ಯ (44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ರಾಯಪತಿ, ಬೀಗ ಹಾಕಿದ ಮನೆ, ರಂಗೋಲಿ ಇಲ್ಲದ ಹಾಗೂ ಕಸ ಬಿದ್ದಿರುತ್ತಿದ್ದ ಮನೆಗಳನ್ನೇ ಗುರುತಿಸಿ ಕೃತ್ಯ ಎಸಗುತ್ತಿದ್ದ. ಆತನಿಂದ ₹ 30 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.
ರಾಯಪತಿ
‘ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕದ್ದಿದ್ದ ಆತ, ಅದರಲ್ಲಿ ನಗರದ ಹಲವೆಡೆ ಓಡಾಡಿದ್ದ. ಮಹಾಲಕ್ಷ್ಮಿ ಲೇಔಟ್ನಲ್ಲಿ ಮನೆಯೊಂದನ್ನು ಗುರುತಿಸಿ ಕಳವು ಮಾಡಿ ಪರಾರಿಯಾಗಿದ್ದ. ದ್ವಿಚಕ್ರ ವಾಹನದಲ್ಲಿ ಓಡಾಡಿದ್ದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ಆತನನ್ನು ಸೆರೆಹಿಡಿಯಲಾಗಿದೆ’ ಎಂದರು.
ಜೈಲಿಗೂ ಹೋಗಿ ಬಂದಿದ್ದ; ‘ಜೂಜಾಟಕ್ಕೆ ಹಣ ಹೊಂದಿಸಲು ಆರೋಪಿ ರಾಯಪತಿ, 2010ರಿಂದಲೇ ಕಳ್ಳತನ ಮಾಡುತ್ತಿದ್ದಾನೆ. ಆಂಧ್ರಪ್ರದೇಶದಲ್ಲೇ ಆತನ ವಿರುದ್ಧ 36 ಪ್ರಕರಣಗಳು ದಾಖಲಾಗಿವೆ. 5 ಬಾರಿ ಜೈಲು ಶಿಕ್ಷೆಯನ್ನೂ ಆತ ಅನುಭವಿಸಿ ಹೊರಬಂದಿದ್ದಾನೆ’ ಎಂದು ಪೊಲೀಸರು ಹೇಳಿದರು.
‘2012ರಲ್ಲಿ ಬಳ್ಳಾರಿಯ ಮನೆಯೊಂದರಲ್ಲಿ ಆತ ಕಳವು ಮಾಡಿದ್ದ. ಜೈಲು ಶಿಕ್ಷೆ ಅನುಭವಿಸಿ ಪುನಃ ಆಂಧ್ರಪ್ರದೇಶಕ್ಕೆ ತೆರಳಿದ್ದ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆತ, ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ವಸತಿಗೃಹವೊಂದರಲ್ಲಿ ಉಳಿದುಕೊಂಡು ಈ ಕೃತ್ಯ ಎಸಗಿದ್ದ’ ಎಂದೂ ತಿಳಿಸಿದರು.