ಬೆಂಗಳೂರು: ಹಗಲಿನಲ್ಲಿ ಮನೆಗಳನ್ನು ಗುರುತಿಸಿ ರಾತ್ರಿ ಕಳವು ಮಾಡುತ್ತಿದ್ದ ಆರೋಪದಡಿ ದಂಡಪಾಣಿ ಅಲಿಯಾಸ್ ಮಣಿಕಂಠ (28) ಎಂಬಾತನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
’ಡಿ.ಜೆ.ಹಳ್ಳಿ ನಿವಾಸಿಯಾದ ದಂಡಪಾಣಿ, ಜ. 20ರಂದು ಸಂಜೆ ಕೆ.ಎಚ್.ಬಿ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ’ ಎಂದು ಪೊಲೀಸರು ಹೇಳಿದರು.
‘ಅಪರಾಧ ಹಿನ್ನೆಲೆಯುಳ್ಳ ಆರೋಪಿ, ಮೂರು ಮನೆಗಳಲ್ಲಿ ಕಳ್ಳತನ ಎಸಗಿರುವುದಾಗಿ ಗೊತ್ತಾಗಿದೆ. ಆತನಿಂದ ₹ 8.27 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.
‘ಠಾಣೆ ವ್ಯಾಪ್ತಿಯ ಭುವನೇಶ್ವರಿನಗರದಲ್ಲಿರುವ ರಾಮಲಿಂಗಂ ಎಂಬುವರ ಮನೆಯಲ್ಲಿ ಕಳೆದ ಮೇ 19ರಂದು ಕಳ್ಳತನವಾಗಿತ್ತು. ಈ ಸಂಬಂಧ ರಾಮಲಿಂಗಂ ದೂರು ನೀಡಿದ್ದರು. ಅವರ ಮನೆಯಲ್ಲಿ ಕಳ್ಳತನ ಎಸಗಿದ್ದು ಆರೋಪಿ ದಂಡಪಾಣಿ ಎಂಬುದು ತನಿಖೆಯಿಂದ ಪತ್ತೆಯಾಗಿದೆ’ ಎಂದೂ ಪೊಲೀಸರು ಹೇಳಿದರು.
‘ಗಾರೆ ಕೆಲಸ ಮಾಡುತ್ತಿದ್ದ ಆರೋಪಿ, ಹಗಲಿನಲ್ಲಿ ಹಲವೆಡೆ ಸುತ್ತಾಡುತ್ತಿದ್ದ. ಬೀಗ ಹಾಕಿರುತ್ತಿದ್ದ, ರಂಗೋಲಿ ಇರದ ಹಾಗೂ ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದ. ಅದೇ ಮನೆಗಳಿಗೆ ರಾತ್ರಿ ಹೋಗಿ, ಕಬ್ಬಿಣದ ರಾಡ್ನಿಂದ ಬೀಗ ಮುರಿದು ಕೃತ್ಯ ಎಸಗುತ್ತಿದ್ದ’ ಎಂದೂ ತಿಳಿಸಿದರು.