ಬೆಂಗಳೂರು: ಹಾಲು ಉತ್ಪನ್ನ ಮಾರಾಟ ಮಳಿಗೆ ಹಾಗೂ ಕೆಲ ಮನೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಕ್ಸೂದ್ ಖಾನ್ ಹಾಗೂ ಫರಾಜ್ ಅಹ್ಮದ್ ಬಂಧಿತರು. ಇವರಿಂದ ₹ 5 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್, ದ್ವಿಚಕ್ರ ವಾಹನ ಹಾಗೂ ಕಬ್ಬಿಣದ ರಾಡ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವಸಂತನಗರ 3ನೇ ಅಡ್ಡರಸ್ತೆಯಲ್ಲಿರುವ ಹಾಲು ಉತ್ಪನ್ನ ಮಾರಾಟ ಮಳಿಗೆ ಹಾಗೂ ತಿಮ್ಮಯ್ಯ ರಸ್ತೆಯ ರೈಲ್ವೆ ಕ್ವಾರ್ಟರ್ಸ್ನ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ಆಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
‘ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದರು. ಕೆಲ ದಿನ ಮನೆ ಬಳಿ ಓಡಾಡುತ್ತಿದ್ದರು. ನಂತರ, ಕಬ್ಬಿಣದ ರಾಡ್ನಿಂದ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡುತ್ತಿದ್ದರು.’
‘ಮಹಾಲಕ್ಷ್ಮಿ ಲೇಔಟ್, ವೈಯಾಲಿಕಾವಲ್ ಹಾಗೂ ಶೇಷಾದ್ರಿಪುರ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.