ಬೆಂಗಳೂರು: ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್ ಒಳಗೆ ಪ್ರವೇಶಿಸಿ, ಪ್ರಯಾಣಿಕರಿಗೆ ತಿಳಿಯದಂತೆ ಚಿನ್ನಾಭರಣ ಹಾಗೂ ನಗದು ಕದಿಯುತ್ತಿದ್ದ ತಂಡವ ನಾಲ್ವರು ಸದಸ್ಯರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆಯ ಚಂದ್ರೇಗೌಡ (45), ಮಂಜುಳಾ (32), ಕೇರಳದ ಜಮಾಲ್ ಅಬ್ದುಲ್ ನಾಸಿರ್ (51) ಹಾಗೂ ಆನೇಕಲ್ನ ಪ್ರಶಾಂತ್ (50) ಬಂಧಿತರು.
‘ಆರೋಪಿಗಳು ಹೆಚ್ಚು ಜನ ಹತ್ತುತ್ತಿದ್ದ ಬಸ್ಗೆ ಪ್ರಯಾಣಿಕರಂತೆ ಪ್ರವೇಶಿಸುತ್ತಿದ್ದರು. ಅಲ್ಲಿ ಚಿನ್ನಾಭರಣ ಹಾಗೂ ನಗದು ಇರುವವರನ್ನು ಪತ್ತೆ ಹಚ್ಚಿ, ಬ್ಯಾಗ್ಗಳು ಹಾಗೂ ಜೇಬಿನಲ್ಲಿರುವ ನಗದನ್ನು ಕದಿಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಕಳೆದ ತಿಂಗಳು ಬೆಂಗಳೂರಿನಿಂದ ಬೇರೆ ಕಡೆಗೆ ಹೋಗಲು ಬಂದಿದ್ದ ಪ್ರಯಾಣಿಕರ ಬಳಿ ಚಿನ್ನಾಭರಣ ಇದ್ದ ಬ್ಯಾಗ್ ಇತ್ತು. ಇದನ್ನು ಆರೋಪಿಗಳನ್ನು ಕದ್ದಿದ್ದರು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು’.
‘ಆರೋಪಿಗಳ ವಿರುದ್ಧ ಠಾಣೆಯಲ್ಲಿ ದಾಖಲಾಗಿದ್ದ ಐದು ಕಳವು ಪ್ರಕರಣಗಳು ಪತ್ತೆಯಾಗಿವೆ. ಇವರಿಂದ ₹4.60 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಒಡವೆಗಳು, ₹48 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.