ಬೆಂಗಳೂರು: ಮೆಜೆಸ್ಟಿಕ್ ಬಸ್ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ, ಮೊಬೈಲ್ ಹಾಗೂ ಬ್ಯಾಗ್ ಕದಿಯುತ್ತಿದ್ದ ನಾಲ್ವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
'ಆರೋಪಿಗಳಿಂದ ₹30 ಸಾವಿರ ನಗದು, ₹16.60 ಲಕ್ಷ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನ ಅಪ್ರೋಜ್ (40) ಮತ್ತು ರವಿ (52) , ಶಿವಮೊಗ್ಗದ ಲೋಹಿತ್ (21), ಬಳ್ಳಾರಿಯ ಅಕ್ಷಯ್ ಸುಶಿಲೇಂದ್ರ (29) ಬಂಧಿತರು. ಇವರು ನಗರದಲ್ಲಿ ಕಟ್ಟಡ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ದುಶ್ಚಟಗಳ ವ್ಯಸನಿಗಳಾಗಿ ತಮ್ಮ ಖರ್ಚು ಹಾಗೂ ನಿರ್ವಹಣೆಗಾಗಿ ಹಣದ ಕೊರತೆ ಎದುರಾದಾಗ ಕಳ್ಳತನ ಮಾಡುತ್ತಿದ್ದರು.
ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ಅಕ್ಟೋಬರ್ನಲ್ಲಿ ಹಾಸನದ ಪ್ರಯಾಣಿಕರೊಬ್ಬರ 50 ಗ್ರಾಂ ಚಿನ್ನದ ಸರ, ₹50 ಸಾವಿರ ನಗದು ಇದ್ದ ಬ್ಯಾಗ್ಮಧ್ಯರಾತ್ರಿ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಆರೋಪಿಗಳ ಗುರುತು ಪತ್ತೆಯಾಗಿತ್ತು. ಮೊದಲ ಹಂತದಲ್ಲಿ ಅಪ್ರೋಜ್ ಮತ್ತು ರವಿ ಸಿಕ್ಕಿಬಿದ್ದಿದ್ದರು. ಇವರೊಂದಿಗೆ ಇನ್ನಿಬ್ಬರು ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಮಾಹಿತಿ ಅನ್ವಯ ಲೋಹಿತ್ ಮತ್ತು ಅಕ್ಷಯ್ನನ್ನು ಬಂಧಿಸಲಾಗಿದೆ.
ಅಪ್ರೋಜ್ ಮತ್ತು ರವಿ ವಿರುದ್ಧ ಶೇಷಾದ್ರಿಪುರ ಹಾಗೂ ಮಡಿವಾಳ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕವೂ, ಕೃತ್ಯ ಮುಂದುವರಿಸಿದ್ದರು. ಈ ವೇಳೆ ಬಸ್ನಿಲ್ದಾಣಗಳಲ್ಲಿ ಜೇಬುಕಳವು ಮಾಡುತ್ತಿದ್ದ ಲೋಹಿತ್ ಮತ್ತು ಅಕ್ಷಯ್ ಪರಿಚಯವಾಗಿತ್ತು. ನಾಲ್ವರೂ ಸೇರಿ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದರು.
'ಆರೋಪಿಗಳ ವಿರುದ್ಧ ಉಪ್ಪಾರಪೇಟೆ, ಕಾಟನ್ಪೇಟೆ, ಕೆಂಗೇರಿ, ಬ್ಯಾಟರಾಯನಪುರ, ವಿಜಯನಗರ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳವು, ಹಣ ಕಳ್ಳತನ, ವಂಚನೆ ಸೇರಿದಂತೆ 10 ಪ್ರಕರಣಗಳು ಪತ್ತೆಯಾಗಿವೆ' ಎಂದು ಪೊಲೀಸರು ತಿಳಿಸಿದ್ದಾರೆ.