ಬೆಂಗಳೂರು: ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ರೇಣುಕಾ ಪ್ರಸಾದ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ರೇಣುಕಾಪ್ರಸಾದ್, ಈಜು ತರಬೇತುದಾರ. ತಮ್ಮ ಬಳಿ ಈಜು ಕಲಿಯಲು ಬರುತ್ತಿದ್ದ ವಿದ್ಯಾರ್ಥಿ ಮನೆಯಲ್ಲೇ ಕಳ್ಳತನ ಎಸಗಿದ್ದರು. ಅವರಿಂದ ₹ 20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚೋಳೂರು ಪಾಳ್ಯದ 1ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ 2019ರ ಫೆ. 25ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ರೇಣುಕಾ ಪ್ರಸಾದ್ ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.
‘ಮನೆ ಮಾಲೀಕರ ಮಗ, ಈಜು ಕಲಿಯಲು ರೇಣುಕಾ ಪ್ರಸಾದ್ ಬಳಿ ಹೋಗುತ್ತಿದ್ದರು. ಅಲ್ಲಿಯೇ ಅವರಿಬ್ಬರಿಗೂ ಪರಿಚಯ ಆಗಿತ್ತು. ಅದೇ ಸಲುಗೆಯಿಂದಾಗಿಯೇ ಆರೋಪಿ, ಆಗಾಗ ವಿದ್ಯಾರ್ಥಿ ಮನೆಗೂ ಹೋಗಿ ಬರುತ್ತಿದ್ದರು.’
‘ವಿದ್ಯಾರ್ಥಿ ಮನೆಯಲ್ಲಿ ಚಿನ್ನ ಹಾಗೂ ನಗದು ಇರುವುದನ್ನು ಆರೋಪಿ ನೋಡಿದ್ದರು. ಸಂಚು ರೂಪಿಸಿ ಕೃತ್ಯ ಎಸಗಿದ್ದರು. ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದೂ ಹೇಳಿದರು.