ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಅಪರಿಚಿತನೊಬ್ಬ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬೆದರಿಕೆ ಬಗ್ಗೆ ರೇಣುಕಾಚಾರ್ಯ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಅಂತರ್ಜಾಲದ ಮೂಲಕ ರೇಣುಕಾಚಾರ್ಯ ಅವರಿಗೆ ಬುಧವಾರ ಕರೆ ಮಾಡಿದ್ದ ಅಪರಿಚಿತ, ‘3-4 ದಿನಗಳಲ್ಲಿ ಕೊಲೆ ಮಾಡುತ್ತೇನೆ’ ಎಂಬುದಾಗಿ ಬೆದರಿಸಿದ್ದ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೆರವಿನಿಂದ ಕರೆ ವಿವರ ಸಂಗ್ರಹಿಸಲಾಗುತ್ತಿದೆ’ ಎಂದೂ ಹೇಳಿದರು.