ಕೆ.ಆರ್.ಪುರ: ಭಟ್ಟರಹಳ್ಳಿ ಸಮೀಪದ ಮಂಜುನಾಥ್ ಲೇಔಟ್ನಲ್ಲಿ ತನ್ನ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂಬ ಕಾರಣಕ್ಕೆ ಕಾಂಪೌಂಡ್ ಒಳಗೆ ನುಗ್ಗಿ ನಾಯಿಯನ್ನು ಹಗ್ಗದಿಂದ ಕಟ್ಟಿಹಾಕಿ ಮನಸೋಇಚ್ಛೆ ಥಳಿಸಲಾಗಿದೆ. ನಾಯಿ ಥಳಿಸಿ ಮಾಲೀಕರಿಗೆ ಬೆದರಿಕೆ ಹಾಕಿದ ಮೂವರನ್ನು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ನಾಗರಾಜ್ ಅವರ ನಾಯಿಯನ್ನು ಗದ್ದಿಗೆಪ್ಪ ಅವರಿಗೆ ಸೇರಿದ ‘ಅಚ್ಚು’ ಹೆಸರಿನ ಶ್ವಾನವು ಬೊಗಳಿ ಕಚ್ಚಿದೆ ಎಂಬ ಕಾರಣಕ್ಕೆ ಸೋಮವಾರ ರಾತ್ರಿ 10 ಸುಮಾರಿಗೆ ಪಕ್ಕದ ಮನೆ ನಾಗರಾಜ್ ಅವರ ಮಕ್ಕಳಾದ ರಾಹುಲ್, ರಜತ್ ಮತ್ತು ರಂಜಿತ್ ಎಂಬುವವರು ನಾಯಿಗೆ ಹಲ್ಲೆ ನಡೆಸಿದ್ದಾರೆ.
ಹಗ್ಗದಿಂದ ಕಟ್ಟಿಹಾಕಿ ನಾಯಿ ಸುತ್ತುರಿದು ಕಣ್ಣುಗುಡ್ಡೆ ಹೊರ ಬರುವಂತೆ ಮನಬಂದಂತೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಶ್ವಾನ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
‘ಅಚ್ಚು’ಗೆ ಹೊಡೆಯದಂತೆ ಕೇಳಿಕೊಂಡರೂ ಅವರ ಮನಸ್ಸು ಕರಗಲಿಲ್ಲ’ ಎಂದು ಮಾಲೀಕರು ನೋವು ತೋಡಿಕೊಂಡಿದ್ಧಾರೆ.
‘ತಲೆಗೆ ತೀವ್ರ ಗಾಯಗೊಂಡಿರುವ ನಾಯಿಗೆ ದೊಮ್ಮಲೂರಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಶ್ನಿಸಿದಕ್ಕೆ ನನ್ನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಪ್ರಾಣ ಬೆದರಿಕೆ ಸಹ ಹಾಕಿದ್ದರು’ ಎಂದು ಗದ್ದಿಗೆಪ್ಪ ಅವರು ಮೂವರ ವಿರುದ್ಧ ದೂರು ನೀಡಿದ್ಧಾರೆ.