ಬೆಂಗಳೂರು: ಜಾಹೀರಾತಿಗೆ ಅನುಮತಿ ಪಡೆಯದೆಯೇ ಚಿತ್ರ ಬಳಸಿಕೊಂಡಿದ್ದ ಪ್ರಕರಣ ಸಂಬಂಧ ನಟ ಗಣೇಶ್ಗೆ ₹ 75 ಲಕ್ಷ ಪರಿಹಾರ ನೀಡುವಂತೆ ಮೋಕ್ಷ್ ಅಗರಬತ್ತಿ ಕಂಪನಿಗೆ 15ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಮಾಡಿದೆ.
ಆದೇಶ ಪ್ರಕಟಗೊಂಡ 60 ದಿನಗಳ ಒಳಗೆ ಪರಿಹಾರ ನೀಡಬೇಕು ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ಗಣೇಶ್ ಪರ ವಕೀಲರು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಗಣೇಶ್ ಅಭಿನಯದ ‘ಚೆಲುವಿನ ಚಿತ್ತಾರ’ ಸಿನಿಮಾದ ನಿರ್ದೇಶಕ ಎಸ್.ನಾರಾಯಣ್ ಅವರು ಮೋಕ್ಷ್ ಅಗರಬತ್ತಿ ಕಂಪನಿ ಜತೆ ಜಾಹೀರಾತು ಪ್ರಕಟ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು. ಅದರನ್ವಯ ಸಿನಿಮಾದ ಚಿತ್ರಗಳನ್ನು ಮಾತ್ರ ಜಾಹೀರಾತಿಗೆ ಬಳಸಿಕೊಳ್ಳಬಹುದಾಗಿತ್ತು.
ಆದರೆ, ಆ ಸಿನಿಮಾದ ಚಿತ್ರಗಳನ್ನು ಹೊರತುಪಡಿಸಿ ಬೇರೆ ಚಿತ್ರಗಳನ್ನೂ ಜಾಹೀರಾತಿಗಾಗಿ ಕಂಪನಿ ಬಳಸಿಕೊಂಡಿದೆ ಎಂದು ಆರೋಪಿಸಿ ಗಣೇಶ್ 2008ರಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.