ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಘೋಷಿಸಿದ್ದ ಶೇ 50ರಷ್ಟು ರಿಯಾಯಿತಿ ಸೌಲಭ್ಯದ ಅವಧಿ ಶನಿವಾರ ಮುಕ್ತಾಯವಾಗಿದ್ದು, 9 ದಿನಗಳಲ್ಲಿ ₹ 102 ಕೋಟಿ ದಂಡ ಸಂಗ್ರಹವಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ಫೆ. 3ರಿಂದ ಫೆ. 11ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ದಂಡ ಪಾವತಿಸಿದ್ದಾರೆ. 35.60 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.
ರಿಯಾಯಿತಿ ಸೌಲಭ್ಯದ ಕೊನೆ ದಿನವಾಗಿದ್ದ ಶನಿವಾರವೂ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ), ಸಂಚಾರ ಪೊಲೀಸ್ ಠಾಣೆಗಳು ಹಾಗೂ ಕರ್ನಾಟಕ ಒನ್- ಬೆಂಗಳೂರು ಒನ್ ಕೇಂದ್ರಗಳಲ್ಲಿ ಜನರು ಸರದಿಯಲ್ಲಿ ನಿಂತು ದಂಡ ಕಟ್ಟಿದರು.
ಆನ್ಲೈನ್ ಮೂಲಕವೂ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಪೇಟಿಎಂ ಆ್ಯಪ್ನಲ್ಲಿ ಹೆಚ್ಚು ಜನರು ದಂಡ ಪಾವತಿಸಿದ್ದಾರೆ.
ದಿನ ವಿಸ್ತರಣೆಗೆ ಕೋರಿಕೆ: ‘ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಯಾಯಿತಿ ಸೌಲಭ್ಯದ ದಿನಾಂಕ ವಿಸ್ತರಣೆ ಮಾಡಲು ಪರಿಶೀಲಿಸಿ’ ಎಂದು ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದಾರೆ.