ಬೆಂಗಳೂರು: ನಗರದಲ್ಲಿ ನೆಲೆಸಿರುವ ಸಾರ್ವಜನಿಕರು ದೀಪಾವಳಿ ಹಬ್ಬ ಆಚರಿಸಲು ತಮ್ಮೂರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಮೆಜೆಸ್ಟಿಕ್ ಕಡೆ ಬಂದಿದ್ದರಿಂದಶುಕ್ರವಾರ ರಾತ್ರಿ ವಿಪರೀತ ದಟ್ಟಣೆ ಉಂಟಾಯಿತು.
ತಿಂಗಳ ನಾಲ್ಕನೇ ಶನಿವಾರದಿಂದಲೇ ಸರಣಿ ರಜೆ ಇರುವುದರಿಂದ ಹಬ್ಬಕ್ಕೂ ಮುನ್ನವೇ ಬಹುತೇಕ ಜನ ಊರಿಗೆ ಹೊರಟರು. ಶುಕ್ರವಾರ ಸಂಜೆಯಿಂದಲೇ ಪ್ರಯಾಣಿಕರು ಮೆಜೆಸ್ಟಿಕ್ನ ಬಸ್ ಹಾಗೂ ರೈಲು ನಿಲ್ದಾಣಗಳತ್ತ ಧಾವಿಸಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಸುತ್ತಮುತ್ತ ಸಾರ್ವಜನಿಕರು ಲಗೇಜು ಸಮೇತ ಗುಂಪು ಗುಂಪಾಗಿ ನಿಂತಿದ್ದು ಕಂಡುಬಂತು.
ನಗರದ ಬೇರೆ ಬೇರೆ ಪ್ರದೇಶಗಳಿಂದ ಜನ ವಾಹನಗಳಲ್ಲಿ ಮೆಜೆಸ್ಟಿಕ್ಗೆ ಆಗಮಿಸಿದ್ದರು. ವಾಹನಗಳ ಸಂಖ್ಯೆ ಹೆಚ್ಚಾಗಿ ದಟ್ಟಣೆ ಉಂಟಾಯಿತು. ನಗರದಿಂದ ಬೇರೆ ಊರುಗಳಿಗೆ ಹೊರಟಿದ್ದ ಬಸ್ಗಳು ದಟ್ಟಣೆಯಲ್ಲಿ ಸಿಲುಕಿದ್ದವು.
ಆನಂದರಾವ್ ವೃತ್ತ, ಚಾಲುಕ್ಯ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್ಎಂಸಿ ಯಾರ್ಡ್, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಇತ್ತು.
ತಮ್ಮೂರಿಗೆ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದ ಜನ, ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಹುಡುಕಾಟ ನಡೆಸಿದರು. ದಟ್ಟಣೆಯಲ್ಲಿ ಸಿಲುಕಿದ್ದ ಬಸ್ ತಲುಪುವಷ್ಟರಲ್ಲಿ ಹೈರಾಣಾದರು.